ಧಾರವಾಡ : ಆಸ್ತಿ ವಿಚಾರವಾಗಿ ಸ್ವಂತ ಅಣ್ಣನೇ ತಂಗಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.
ಶಿವಲೀಲಾ ಸಂಗೊಳ್ಳಿ (35) ಕೊಲೆಯಾದ ತಂಗಿ, ಹಣಮಂತ ಯಲಿವಾಳ ಕೊಲೆ ಆರೋಪಿಯಾಗಿದ್ದಾನೆ. ಬೆಳಗ್ಗೆ ಯುಗಾದಿ ಪಾಡ್ಯದ ದಿನದಂದು ಶಿವಲೀಲಾ ಭೂಮಿ ಪೂಜೆಗಾಗಿ ಜಮೀನಿಗೆ ತೆರಳಿದ್ದಳು. ಈ ವೇಳೆ, ಇಬ್ಬರ ನಡುವೆ ಗಲಾಟೆ ಸಂಭವಿಸಿ ಕೊಲೆಯಲ್ಲಿ ಅಂತ್ಯಗೊಂಡಿದೆ. ನಾಲ್ಕು ಎಕರೆ ಭೂಮಿ ಹೊಂದಿದ್ದು, ಇದರಲ್ಲಿ ಶಿವಲೀಲಾ ಪಾಲು ಕೇಳಿ ಯುಗಾದಿ ದಿನವೇ ತನ್ನ ಪಾಲಿನ ಭೂಮಿ ಪೂಜೆ ಮಾಡಬೇಕು ಅಂತ ಹೋಗಿದ್ದಳು. ಈ ವೇಳೆ, ಆಸ್ತಿ ಪಾಲು ವಿಚಾರಕ್ಕಾಗಿ ಇಬ್ಬರ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿದ ಹಿನ್ನೆಲೆ ತಂಗಿಯನ್ನು ಅಣ್ಣ ಕೊಚ್ಚಿ ಕೊಂದಿದ್ದಾನೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಬಗ್ಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ನಿನ್ನೆ ಅಮ್ಮಿನಬಾವಿ ಗ್ರಾಮದಲ್ಲಿ ಕೊಲೆಯಾಗಿದೆ. 35 ವರ್ಷದ ಮಹಿಳೆಯನ್ನು ಆಕೆಯ ಅಣ್ಣನೇ ಕೊಲೆ ಮಾಡಿದ್ದಾನೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕುಡಗೋಲಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾನೆ, ತೀವ್ರ ರಕ್ತಸ್ರಾವವಾಗಿ ಮಹಿಳೆ ಮೃತಪಟ್ಟಿದ್ದಾಳೆ ಎಂದಿದ್ದಾರೆ.
ಗುರುವಾರ ಸಾಯಂಕಾಲ ಧಾರವಾಡ ಗ್ರಾಮೀಣ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇವರಿಬ್ಬರ ತಾಯಿ ಐದು ತಿಂಗಳ ಹಿಂದೆ ಮೃತಪಟ್ಟಿದ್ದಾಳೆ. ತಾಯಿ ಮೃತಪಟ್ಟ ಬಳಿಕ ಆಸ್ತಿ ವಿಚಾರಕ್ಕಾಗಿ ಗಲಾಟೆಯಾಗಿದೆ. ನಿನ್ನೆ ಭೂಮಿ ಪೂಜೆಗಾಗಿ ಶಿವಲೀಲಾ ಜಮೀನಿಗೆ ಹೋಗಿದ್ದಳು, ಆಕೆಯ ಅಣ್ಣ ಹಣಮಂತಗೆ ಈ ವಿಷಯ ಗೊತ್ತಾಗಿ ಜಮೀನಿಗೆ ಹೋಗಿ ಜಗಳ ಮಾಡಿದ್ದಾನೆ. ಇದೇ ವೇಳೆ ಸಿಟ್ಟಿಗೆದ್ದು ಶಿವಲೀಲಾಳ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಚಿನ್ನದಂಗಡಿಯಲ್ಲಿಯೇ 49 ಗ್ರಾಂ ಚಿನ್ನದ ಸರ ಎಗರಿಸಿದ ಸೇಲ್ಸ್ ಗರ್ಲ್!



















