ಬೆಂಗಳೂರು : ರಾಜ್ಯದಲ್ಲಿ ಯುಗಾದಿ, ಈದ್ ಉಲ್ ಫಿತರ್, ಗುಡ್ ಫ್ರೈಡೆ ಹಬ್ಬಗಳನ್ನು ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ KMFಗೆ ಸಂಕಷ್ಟ ಎದುರಾಗಿದೆ.
ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದದ ಕಾರ್ಮೋಡ ಕೆಎಂಎಫ್ಗೂ ತಗುಲಿದ್ದು, ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ನಂದಿನ ಹಾಲು ಉತ್ಪನ್ನಗಳ ಮೇಲೆ ಬಿದ್ದಿದೆ. ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆಯೇ ಇದಕ್ಕೆ ಕಾರಣವಾಗಿದೆ.
ದಿನ ಕಳೆದಂತೆ ಒಂದೊಂದೆ ಉದ್ಯಮದ ಮೇಲೆ ಗ್ಯಾಸ್ ಸಿಲಿಂಡರ್ ಕೊರತೆ ಸಮಸ್ಯೆ ಎದುರಾಗುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಈಗಾಗಲೇ ಹಲವು ಹೋಟೆಲ್ ಉದ್ಯಮಗಳು ಸ್ಥಗಿತಗೊಂಡಿವೆ. ಇನ್ನು, ಕೆಲವು ಹೋಟೆಲ್ಗಳು ಸೌದೆ ಒಲೆಯನ್ನು ಅವಲಂಬಿಸಿವೆ. ಕೆಲವು ಕಾರ್ಖಾನೆಗಳಿಗೂ ಈ ಬಿಸಿ ಮುಟ್ಟಿದೆ. ಇದೀಗ ಕೆಎಂಎಫ್ ಸರದಿ ಬಂದಿದೆ.
ಕೆಎಂಎಫ್ ಗೆ ಅಗತ್ಯ ಇರುವಷ್ಟು ಸಿಲಿಂಡರ್ಗಳು ಲಭ್ಯವಾಗದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಸಿಲಿಂಡರ್ಗಳು ಕೆಎಂಎಫ್ಗೆ ಬೇಕಾಗಿದ್ದು, ಇವು ಅಗತ್ಯ ಪ್ರಮಾಣದಲ್ಲಿ ಸಿಗದೇ ಇರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಗ್ಯಾಸ್ ಸಿಲಿಂಡರ್ಗಳ ಸಂಗ್ರಹವು ಇನ್ನೆರೆಡು ದಿನಗಳಿಗೆ ಲಭ್ಯವಿದ್ದು, ಇವು ಖಾಲಿಯಾದ ಬಳಿಕವೂ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಾಗದಿದ್ದಲ್ಲಿ ನಂದಿನ ಬ್ರ್ಯಾಂಡ್ನ ಹಲವು ಉತ್ಪನ್ನಗಳ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಈ ಸಮಸ್ಯೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದ್ದು, ಸೂಕ್ತ ಕ್ರಮಕೈಗೊಳ್ಳಲು ಮನವಿ ಮಾಡಲಾಗಿದೆ. ಇನ್ನೆರೆಡು ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದೇ ಇದ್ದರೆ, ನಂದಿನ ಉತ್ಪನ್ನಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಚಾಲಕನ ನಿರ್ಲಕ್ಷ್ಯ.. BMTC ಡಿಪೋ ಕೊಠಡಿಗೆ ನುಗ್ಗಿದ ಬಸ್!



















