ಮುಂಬೈ: ಅತ್ಯಂತ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮುಂಬೈನ ಗೋರೆಗಾಂವ್ನಲ್ಲಿ ಬೆಳಕಿಗೆ ಬಂದಿದೆ. ತಾವು ಅಡುಗೆ ಮಾಡಿ ತಿನ್ನಲೆಂದು ಇಟ್ಟಿದ್ದ ಮೀನಿನ ಖಾದ್ಯವನ್ನು ಸ್ನೇಹಿತನೇ ತಿಂದಿದ್ದಾನೆ ಎಂದು ಶಂಕಿಸಿ, ಇಬ್ಬರು ಸೇರಿ ಆತನನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ. ಆದರೆ, ವಾಸ್ತವದಲ್ಲಿ ಆ ಮೀನನ್ನು ತಿಂದಿದ್ದು ಇಲಿಗಳು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಫೆಬ್ರವರಿ 24 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ವ್ಯಕ್ತಿಯನ್ನು 35 ವರ್ಷದ ಅಫ್ಸರ್ ಎಂದು ಗುರುತಿಸಲಾಗಿದೆ. ಅಫ್ಸರ್ ಮತ್ತು ಆತನ ಸ್ನೇಹಿತರಾದ ಸುರೇಶ್ ಹಾಗೂ ರಾಜೇಶ್ ರಮೇಶ್ನಾಥ್ ಅಲಿಯಾಸ್ ನೇಪಾಳಿ ಒಂದೇ ಮನೆಯಲ್ಲಿ ವಾಸವಿದ್ದರು. ಇವರೆಲ್ಲರೂ ಗುಜರಿ ವ್ಯಾಪಾರ ಮಾಡಿ ಜೀವನ ಸಾಗುತ್ತಿದ್ದರು. ಘಟನೆ ನಡೆದ ದಿನ ಅವರು ಗೋರೆಗಾಂವ್ನಲ್ಲಿರುವ ತಮ್ಮ ಮನೆಯಲ್ಲಿ ಅಂದು ಮೀನಿನ ಅಡುಗೆ ಮಾಡಿದ್ದರು. ಈ ವೇಳೆ ಅಫ್ಸರ್ ಮದ್ಯಪಾನ ಮಾಡುತ್ತಿದ್ದ. ಅಡುಗೆ ತಯಾರಿಸಿದ ಬಳಿಕ ಆಯಾಸದಿಂದ ಮೂವರೂ ಮಲಗಿದ್ದು, ಅಲ್ಲೇ ನಿದ್ದೆಗೆ ಜಾರಿದ್ದಾರೆ. ಇದೇ ವೇಳೆ ಅಲ್ಲಿಗೆ ಬಂದ ಇಲಿಗಳು ಪಾತ್ರೆಯಲ್ಲಿದ್ದ ಮೀನನ್ನೆಲ್ಲಾ ತಿಂದಿವೆ.
ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ ಸುರೇಶ್ ಮತ್ತು ರಾಜೇಶ್ ಊಟ ಮಾಡಲೆಂದು ಪಾತ್ರೆಯ ಬಳಿ ಹೋದಾಗ, ಪಾತ್ರೆಯಲ್ಲಿದ್ದ ಮೀನು ನಾಪತ್ತೆಯಾಗಿತ್ತು. ಮಲಗಿದ್ದ ಅಫ್ಸರ್ ಇದನ್ನೆಲ್ಲ ತಿಂದು ಮುಗಿಸಿರಬಹುದು ಎಂದು ತಪ್ಪಾಗಿ ಭಾವಿಸಿದ ಇವರಿಬ್ಬರೂ, ಆತನನ್ನು ಎಬ್ಬಿಸಿ ಜಗಳಕ್ಕೆ ಇಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಕೋಪದ ಭರದಲ್ಲಿ ಅಫ್ಸರ್ಗೆ ಮನಬಂದಂತೆ ಥಳಿಸಿದ್ದಾರೆ. ಬಳಿಕ ದೊಡ್ಡ ಕಲ್ಲಿನಿಂದ ಆತನ ತಲೆಗೆ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮೊಬೈಲ್ ಇಲ್ಲದ ಆರೋಪಿಗಳ ಬೆನ್ನು ಹತ್ತಿದ ಖಾಕಿ
ಸ್ನೇಹಿತನನ್ನು ಕೊಲೆ ಮಾಡಿದ ಬಳಿಕ ಇಬ್ಬರೂ ಆರೋಪಿಗಳು ಮುಂಬೈನಿಂದ ಪರಾರಿಯಾಗಿದ್ದರು. ಈ ಕುರಿತು ವನ್ರಾಯ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಿಗಾಗಿ ಶೋಧ ಆರಂಭಿಸಿದರು. ಆದರೆ, ಆರೋಪಿಗಳ ಬಳಿ ಯಾವುದೇ ಮೊಬೈಲ್ ಫೋನ್ ಆಗಲಿ ಅಥವಾ ಗುರುತಿನ ಚೀಟಿಯಾಗಲಿ ಇರಲಿಲ್ಲ. ಹೀಗಾಗಿ ಅವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ತನಿಖೆ ಚುರುಕುಗೊಳಿಸಿದ ಪೊಲೀಸರು, ಆ ಪ್ರದೇಶದ ಸುಮಾರು 50ಕ್ಕೂ ಹೆಚ್ಚು ಕಸ ಆಯುವವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಿದರು. ಕಡೆಗೂ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಹರ್ಯಾಣದ ಕೈತಾಲ್ ಮೂಲದ ಸುರೇಶ್ನನ್ನು ಹರ್ಯಾಣದಲ್ಲಿ ಮತ್ತು ನೇಪಾಳ ಮೂಲದ ರಾಜೇಶ್ನನ್ನು ರೈಲು ನಿಲ್ದಾಣವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ.
ತನಿಖೆ ಚುರುಕು
ಬಂಧಿತರ ವಿಚಾರಣೆ ವೇಳೆ ಹಲವು ಗಂಭೀರ ವಿಚಾರಗಳು ಹೊರಬಿದ್ದಿವೆ. ಬಂಧಿತರಲ್ಲಿ ಒಬ್ಬನಾದ ಆರೋಪಿ ರಾಜೇಶ್, ಈ ಹಿಂದೆಯೂ ಕೊಲೆ, ಸುಲಿಗೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ. ಸದ್ಯ ಮೃತ ಅಫ್ಸರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆ ಕುರಿತಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಇರಾನ್ನ ‘ಕ್ರೌನ್ ಜ್ಯುವೆಲ್’ ಖಾರ್ಗ್ ದ್ವೀಪದ ಮೇಲೆ ಅಮೆರಿಕದ ಭೀಕರ ದಾಳಿ : ಸೇನಾ ನೆಲೆಗಳು ಸಂಪೂರ್ಣ ಧ್ವಂಸ



















