ಬಾಗಲಕೋಟೆ: ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಪತಿ ಕಿರುಕುಳ ನೀಡಿ ಹಣ ಹಾಗೂ ಬಂಗಾರವನ್ನು ದೋಚಿ ಬೀದಿಗೆ ಬಿಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾದ ಶ್ರೀದೇವಿ (ಈಗಿನ ಹೆಸರು ಹಬೀಬಾ) ಮೂಲತಃ ಕುರುಬ ಸಮುದಾಯದವರು. 14 ವರ್ಷಗಳ ಹಿಂದೆ ಸ್ವಜಾತಿಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು ಅವರಿಗೆ ಮಕ್ಕಳು ಕೂಡ ಇದ್ದರು. ಬಳಿಕ ಮುಧೋಳದಲ್ಲಿ ಕೆಲಸಕ್ಕೆ ಬಂದಾಗ ಮುಸ್ಲಿಂ ಸಮುದಾಯದ ಸವಿಫ್ ಪತ್ತೆ ಎಂಬಾತನ ಪರಿಚಯವಾಗಿದ್ದು, ಪ್ರೀತಿಸುವುದಾಗಿ ನಂಬಿಸಿ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸವಿಫ್ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದರೂ, ಶ್ರೀದೇವಿಯನ್ನು ಬೆದರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ. ಶ್ರೀದೇವಿ ಎಂಬ ಹೆಸರನ್ನು ‘ಹಬೀಬಾ’ ಎಂದು ಬದಲಿಸಿ 2023ರ ಫೆಬ್ರವರಿ 7ರಂದು ಮುಸ್ಲಿಂ ಪದ್ಧತಿಯಂತೆ ನಿಖಾ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮದುವೆಯಾದ ಕೆಲ ದಿನಗಳ ಬಳಿಕ ಪತಿ ತನ್ನ ಅಸಲಿ ರೂಪ ತೋರಿಸಿದ್ದು, ತನ್ನ ಬಳಿಯಿದ್ದ 4 ಲಕ್ಷ ರೂ. ನಗದು ಮತ್ತು 4 ತೊಲೆ ಚಿನ್ನದ ಆಭರಣಗಳನ್ನು ಕಸಿದುಕೊಂಡು ಮೊದಲ ಪತ್ನಿಯ ಜೊತೆ ಸೇರಿಕೊಂಡಿದ್ದಾನೆ. ತನ್ನ ಮೇಲೆ ಹಲ್ಲೆ ನಡೆಸಿ ಮನೆ ಹೊರಗೆ ತಳ್ಳಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
“ಈಗ ನನಗೆ ಮೊದಲ ಗಂಡನೂ ಇಲ್ಲ, ಎರಡನೇ ಪತಿಯೂ ಕೈಕೊಟ್ಟಿದ್ದಾನೆ. ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು?” ಎಂದು ಮಹಿಳೆ ಆಕ್ರಂದನ ವ್ಯಕ್ತಪಡಿಸಿದ್ದಾರೆ. ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೂ ಸ್ಪಂದನೆ ಇಲ್ಲ ಎಂದು ಅವರು ದೂರಿದ್ದಾರೆ.
ಮಹಿಳೆಯ ಮನವಿಯನ್ನು ಆಲಿಸಿದ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಪತಿಯಿಂದ ಕಿರುಕುಳವಾಗಿರುವ ಬಗ್ಗೆ ದೂರು ಬಂದಿದ್ದು ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜೊತೆಗೆ ಮಹಿಳಾ ಠಾಣೆಯ ಮೂಲಕವೂ ಪ್ರಕರಣ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಫಿಲ್ಮಿ ಸ್ಟೈಲ್ನಲ್ಲಿ ಕಾರಿನಲ್ಲಿದ್ದ ಹಣದ ಬ್ಯಾಗ್ ಎಗರಿಸಿ ಎಸ್ಕೇಪ್ ಆಗುವಷ್ಟರಲ್ಲಿ ಲಾಕ್ | ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯರು ಥಳಿತ



















