ನ್ಯೂಯಾರ್ಕ್ : ಅಮೆರಿಕದ ಪ್ರಮುಖ ರಾಜಕೀಯ ನಾಯಕರ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಪಾಕಿಸ್ತಾನಿ ಪ್ರಜೆ ಆಸಿಫ್ ಮರ್ಚೆಂಟ್, ನ್ಯಾಯಾಲಯದಲ್ಲಿ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಇರಾನ್ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ನನ್ನನ್ನು ನೇಮಿಸಿಕೊಂಡು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಮತ್ತು ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಅವರನ್ನು ಕೊಲ್ಲಲು ಒತ್ತಡ ಹೇರಿದ್ದರು ಎಂದು ಅವರು ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ.
‘ನನಗೆ ಬೇರೆ ಆಯ್ಕೆ ಇರಲಿಲ್ಲ’
47 ವರ್ಷದ ಆಸಿಫ್ ಮರ್ಚೆಂಟ್ ತಾನು ಅನಿವಾರ್ಯವಾಗಿ ಈ ಸಂಚಿನಲ್ಲಿ ಭಾಗಿಯಾಗಬೇಕಾಯಿತು ಎಂದು ಜ್ಯೂರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. “ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇತ್ತು, ಹಾಗಾಗಿ ನನಗೆ ಬೇರೆ ದಾರಿಯೇ ಇರಲಿಲ್ಲ,” ಎಂದು ಅವರು ಹೇಳಿದ್ದಾರೆ. ನಾನು ಈ ಹಿಂದೆ ಬ್ಯಾಂಕರ್ ಆಗಿದ್ದೆ. ಬಾಳೆಹಣ್ಣು ರಫ್ತು ಮಾಡುವ ಉದ್ದಿಮೆಯಲ್ಲಿ ನಷ್ಟ ಅನುಭವಿಸಿದ್ದೆ ಎಂದು ತಿಳಿಸಿದ ಅವರು, ಇದೇ ಸಂದರ್ಭವನ್ನು ಬಳಸಿಕೊಂಡ ಇರಾನ್ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿದ್ದರು ಎಂದು ವಿವರಿಸಿದ್ದಾರೆ. ಮೊದಲು ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳನ್ನು ಮೀರಿ ಹಣ ವರ್ಗಾವಣೆ ಮಾಡಲು ನೆರವಾಗಿದ್ದ ನನಗೆ, ನಂತರ ಹತ್ಯೆಯ ಸುಪಾರಿ ನೀಡಲಾಯಿತು ಎಂದು ಮರ್ಚೆಂಟ್ ತಿಳಿಸಿದ್ದಾರೆ.
5,000 ಡಾಲರ್ ಸುಪಾರಿ
ಮರ್ಚೆಂಟ್ ಈ ಹತ್ಯೆಗಳನ್ನು ಮಾಡಲು ಇಬ್ಬರನ್ನು ಬಾಡಿಗೆ ಕೊಲೆಗಾರರೆಂದು ನಂಬಿ ಸಂಪರ್ಕಿಸಿದ್ದರು. ಆದರೆ, ಅವರು ನಿಜಕ್ಕೂ ಅಮೆರಿಕದ ಗುಪ್ತಚರ ಸಂಸ್ಥೆ ಎಫ್ಬಿಐನ (FBI) ಅಂಡರ್ ಕವರ್ ಏಜೆಂಟ್ಗಳಾಗಿದ್ದರು. ಈ ಹತ್ಯೆಗಾಗಿ ಮರ್ಚೆಂಟ್ ಅವರಿಗೆ ಕೇವಲ 5,000 ಡಾಲರ್ (ಸುಮಾರು 4.6 ಲಕ್ಷ ರೂಪಾಯಿ) ಹಣದ ಆಫರ್ ನೀಡಿದ್ದರು ಎನ್ನಲಾಗಿದೆ.
ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರತಿಕ್ರಿಯಿಸಿದ ಅವರು, “ಇಷ್ಟು ಕಡಿಮೆ ಮೊತ್ತಕ್ಕೆ ಯಾರೂ ಕೊಲೆ ಮಾಡುವುದಿಲ್ಲ ಎನ್ನುವುದು ನನಗೆ ತಿಳಿದಿತ್ತು. ನಾನು ಸಿಕ್ಕಿಬೀಳುತ್ತೇನೆ ಎಂಬ ಅರಿವು ನನಗಿತ್ತು,” ಎಂದು ಹೇಳಿದ್ದಾರೆ. ಜೂನ್ 2024ರಲ್ಲಿ ಕ್ವೀನ್ಸ್ನ ಹೋಟೆಲ್ವೊಂದರಲ್ಲಿ ನಡೆದ ಮಾತುಕತೆಯ ವಿಡಿಯೋ ದಾಖಲೆಗಳನ್ನು ಪ್ರಾಸಿಕ್ಯೂಟರ್ಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಕೈವಾಡ?
ತನ್ನನ್ನು ಸಂಪರ್ಕಿಸಿದ ವ್ಯಕ್ತಿಯನ್ನು ಮೆಹರ್ದಾದ್ ಯೂಸೆಫ್ ಎಂದು ಗುರುತಿಸಿರುವ ಮರ್ಚೆಂಟ್, ಆತ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸದಸ್ಯನಾಗಿದ್ದ. ನನ್ನ ಕುಟುಂಬ ಇರಾನ್ನಲ್ಲಿತ್ತು. ಅವರನ್ನು ಕೊಲೆಗೈಯ್ಯುವುದಾಗಿ ಆಗಾಗ್ಗೆ ಯೂಸೆಫ್ ಬೆದರಿಕೆ ಹಾಕುತ್ತಿದ್ದ. ಒಂದು ಬಾರಿ ಶಸ್ತ್ರಸಜ್ಜಿತನಾಗಿ ನನ್ನ ಮನೆಯ ಹೊರಗೆಯೇ ಕಾಣಿಸಿಕೊಂಡಿದ್ದ. ಈ ಎಲ್ಲ ಬೆಳವಣಿಗೆಗಳಿಂದಾಗಿ ನಾನು ಹೆದರಿದ್ದೆ ಎಂದು ಮರ್ಚೆಂಟ್ ಹೇಳಿದ್ದಾನೆ.
ನಾನು ಬಂಧನಕ್ಕೊಳಗಾದ ನಂತರ ಅಮೆರಿಕ ಸರ್ಕಾರಕ್ಕೆ ಈ ಎಲ್ಲಾ ಮಾಹಿತಿ ನೀಡಿ, ಪ್ರತಿಯಾಗಿ ಅಮೆರಿಕದ ‘ಗ್ರೀನ್ ಕಾರ್ಡ್’ ಪಡೆಯುವ ಆಸೆ ಹೊಂದಿದ್ದೆ ಎಂದೂ ಅವರು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಭಯೋತ್ಪಾದನೆ ಮತ್ತು ಹತ್ಯೆ ಸಂಚಿನ ಆರೋಪ ಎದುರಿಸುತ್ತಿರುವ ಮರ್ಚೆಂಟ್, ಒಂದು ವೇಳೆ ದೋಷಿ ಎಂದು ಸಾಬೀತಾದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಒಳಮೀಸಲಾತಿ ಗೊಂದಲದ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ | ಜಿ.ಪರಮೇಶ್ವರ್



















