ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿ ಹಾಗೂ ಇರಾನ್ ನಡೆಸುತ್ತಿರುವ ಪ್ರತಿದಾಳಿಯ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೀವ್ರ ಆತಂಕ ಮನೆಮಾಡಿದೆ. ಜಗತ್ತಿನ ಅತಿ ಪ್ರಮುಖ ತೈಲ ಪೂರೈಕಾ ಮಾರ್ಗವಾಗಿರುವ ‘ಹೊರ್ಮುಜ್ ಜಲಸಂಧಿ’ಯನ್ನು (Strait of Hormuz) ಮುಚ್ಚಿರುವುದಾಗಿ ಇರಾನ್ ಘೋಷಿಸಿದೆ. ಇರಾನ್ನ ಈ ನಿರ್ಧಾರವು ಜಾಗತಿಕ ಆರ್ಥಿಕತೆಯ ಜೊತೆಗೆ ಭಾರತದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಅರೇಬಿಯನ್ ಕೊಲ್ಲಿಯಲ್ಲಿ ಕಾರ್ಯಾಚರಿಸುತ್ತಿರುವ ವಾಣಿಜ್ಯ ಹಡಗುಗಳಿಗೆ ಹೊರ್ಮುಜ್ ಜಲಸಂಧಿ ಮುಚ್ಚಿರುವ ಕುರಿತು ರೇಡಿಯೋ ಸಂದೇಶಗಳು ರವಾನೆಯಾಗುತ್ತಿವೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಬಿಕ್ಕಟ್ಟು ಜಾಗತಿಕ ಆರ್ಥಿಕ ಬಿಕ್ಕಟ್ಟಾಗಿ ಪರಿವರ್ತನೆಗೊಳ್ಳುವ ಎಲ್ಲ ಸಾಧ್ಯತೆಯನ್ನೂ ಸೃಷ್ಟಿಸಿದೆ.

ಹೊರ್ಮುಜ್ ಜಲಸಂಧಿಯ ಮಹತ್ವವೇನು?
ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುವ ಹೊರ್ಮುಜ್ ಜಲಸಂಧಿಯು ಭೌಗೋಳಿಕವಾಗಿ ಇರಾನ್ ಮತ್ತು ಒಮಾನ್ ನಡುವೆ ಇದೆ. ಕೇವಲ 50 ಕಿಲೋಮೀಟರ್ ಅಗಲ ಹಾಗೂ ಗರಿಷ್ಠ 60 ಮೀಟರ್ ಆಳವನ್ನು ಹೊಂದಿರುವ ಈ ಕಿರಿದಾದ ಜಲಮಾರ್ಗವನ್ನು ಸೇನಾ ಕಾರ್ಯಾಚರಣೆಗಳ ಮೂಲಕ ಬಹಳ ಸುಲಭವಾಗಿ ನಿರ್ಬಂಧಿಸಬಹುದಾಗಿದೆ. ಹೋರ್ಮುಜ್, ಕೇಶ್ಮ್, ಲಾರಕ್ ಹಾಗೂ ವಿವಾದಿತ ಗ್ರೇಟರ್ ಮತ್ತು ಲೆಸ್ಸರ್ ಟುನ್ಬ್ ದ್ವೀಪಗಳನ್ನು ಹೊಂದಿರುವ ಈ ಪ್ರದೇಶವು 1971ರಿಂದ ಇರಾನ್ನ ಆಯಕಟ್ಟಿನ ಸೇನಾ ನೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇರಾನ್ನ ಸರ್ವೋಚ್ಚ ನಾಯಕನ ಅಧೀನದಲ್ಲಿರುವ ಪ್ರಬಲ ಕ್ರಾಂತಿಕಾರಿ ಪಡೆ (IRGC) ಈ ಮಾರ್ಗದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದು, ಯಾವುದೇ ವಿದೇಶಿ ಹಸ್ತಕ್ಷೇಪ ಅಥವಾ ನೌಕಾ ಸಂಚಾರವನ್ನು ಸುಲಭವಾಗಿ ತಡೆಯಬಲ್ಲ ಭೌಗೋಳಿಕ ಶಕ್ತಿಯನ್ನು ಇದು ಹೊಂದಿದೆ.
ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿ
ಅಮೆರಿಕದ ಎನರ್ಜಿ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್ (EIA) ವರದಿಗಳ ಪ್ರಕಾರ, ಜಾಗತಿಕ ತೈಲ ಪೂರೈಕೆಯ ಶೇಕಡಾ 20ರಷ್ಟು (ಪ್ರತಿದಿನ ಅಂದಾಜು 20 ದಶಲಕ್ಷ ಬ್ಯಾರೆಲ್) ಹಾಗೂ ದ್ರವೀಕೃತ ನೈಸರ್ಗಿಕ ಅನಿಲದ (LNG) ಐದನೇ ಒಂದು ಭಾಗ ಇದೇ ಜಲಸಂಧಿಯ ಮೂಲಕವೇ ಸಾಗಣೆಯಾಗುತ್ತದೆ. ಇಲ್ಲಿಂದ ಸಾಗುವ ಶೇಕಡಾ 80ರಷ್ಟು ತೈಲ ಏಷ್ಯಾ ಖಂಡದ ಮಾರುಕಟ್ಟೆಗಳಿಗೆ ತಲುಪುತ್ತದೆ. ಸೌದಿ ಅರೇಬಿಯಾ ಮತ್ತು ಯುಎಇ ಪರ್ಯಾಯ ಪೈಪ್ಲೈನ್ ವ್ಯವಸ್ಥೆ ಹೊಂದಿದ್ದರೂ, ಅವುಗಳ ಸಾಮರ್ಥ್ಯ ಕೇವಲ 2.6 ದಶಲಕ್ಷ ಬ್ಯಾರೆಲ್ಗಳಿಗೆ ಸೀಮಿತವಾಗಿದೆ. ಹೀಗಾಗಿ, ಈ ಜಲಸಂಧಿ ಸಂಪೂರ್ಣವಾಗಿ ಬಂದ್ ಆದರೆ ಪರ್ಯಾಯ ಮಾರ್ಗಗಳಿಲ್ಲದೆ ಜಾಗತಿಕ ತೈಲ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತವಾಗಲಿದೆ.
ಭಾರತದ ಆರ್ಥಿಕತೆಯ ಮೇಲೂ ಹೊಡೆತ
ಭಾರತವು ತನ್ನ ಕಚ್ಚಾ ತೈಲದ ಒಟ್ಟು ಬೇಡಿಕೆಯ ಶೇ.90ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದು, ಈ ಯುದ್ಧದ ಬಿಕ್ಕಟ್ಟು ಭಾರತದ ಪಾಲಿಗೆ ಅತಿದೊಡ್ಡ ಆರ್ಥಿಕ ಸವಾಲಾಗಿ ಪರಿಣಮಿಸಲಿದೆ. ಜಾಗತಿಕ ದತ್ತಾಂಶ ಮತ್ತು ವಿಶ್ಲೇಷಣಾ ಸಂಸ್ಥೆ ‘ಕೆಪ್ಲರ್’ (Kpler) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಭಾರತಕ್ಕೆ ಆಮದಾಗುವ ಒಟ್ಟು ಕಚ್ಚಾ ತೈಲದಲ್ಲಿ ಶೇ.50ರಷ್ಟು, ಅಂದರೆ ಪ್ರತಿದಿನ 2.5 ರಿಂದ 2.7 ದಶಲಕ್ಷ ಬ್ಯಾರೆಲ್ ತೈಲ ಇದೇ ಹೊರ್ಮುಜ್ ಜಲಸಂಧಿಯ ಮೂಲಕವೇ ಹಾದುಬರುತ್ತದೆ. ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್ನಿಂದ ಬರುವ ತೈಲ ಮಾರ್ಗ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತವು ರಷ್ಯಾದ ತೈಲ ಆಮದನ್ನು ಕೊಂಚ ತಗ್ಗಿಸಿ, ಮಧ್ಯಪ್ರಾಚ್ಯದ ಮೇಲಿನ ಅವಲಂಬನೆಯನ್ನು ಹೆಚ್ಚಿಸಿಕೊಂಡಿರುವುದರಿಂದ ಈ ಬಿಕ್ಕಟ್ಟು ಭಾರತಕ್ಕೆ ತಕ್ಷಣದ ಹೊಡೆತ ನೀಡಲಿದೆ. ತೈಲ ಪೂರೈಕೆಯಲ್ಲಿ ತಕ್ಷಣಕ್ಕೆ ವ್ಯತ್ಯಯವಾಗದಿದ್ದರೂ, ಯುದ್ಧದ ಭೀತಿಯಿಂದಾಗಿ ಹಡಗುಗಳ ವಿಮಾ ವೆಚ್ಚ ಮತ್ತು ಸಾಗಣೆ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಲಿವೆ. ಇದು ಬ್ರೆಂಟ್ ಕಚ್ಚಾ ತೈಲದ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದ್ದು, ಭಾರತದ ಆಮದು ವೆಚ್ಚ ದುಬಾರಿಯಾಗುವ ಜೊತೆಗೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿ ಹಣದುಬ್ಬರ ಉಲ್ಬಣಿಸುವ ಸಾಧ್ಯತೆಯಿದೆ.
ಭಾರತದ ಮುಂದಿರುವ ಪರ್ಯಾಯ ಮಾರ್ಗವೇನು?
ಪೂರ್ಣ ಪ್ರಮಾಣದಲ್ಲಿ ಜಲಸಂಧಿಯನ್ನು ಮುಚ್ಚುವುದು ಸ್ವತಃ ಇರಾನ್ನ ಸ್ವಂತ ತೈಲ ರಫ್ತಿಗೆ ಹಾಗೂ ಆರ್ಥಿಕತೆಗೆ ಮಾರಕವಾಗುವುದರಿಂದ, ಸುದೀರ್ಘಾವಧಿಯವರೆಗೆ ಮಾರ್ಗ ನಿರ್ಬಂಧಿಸುವ ಸಾಧ್ಯತೆ ಕಡಿಮೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ತಾತ್ಕಾಲಿಕ ಅಡಚಣೆಗಳು, ಮಾರ್ಗ ಬದಲಾವಣೆ ಮತ್ತು ಕಟ್ಟುನಿಟ್ಟಿನ ಭದ್ರತಾ ತಪಾಸಣೆಗಳಿಂದಾಗಿ ಹಡಗುಗಳ ಸಂಚಾರ ವಿಳಂಬವಾಗುವುದು ನಿಶ್ಚಿತ. ಈ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡರೆ, ಭಾರತೀಯ ತೈಲ ಸಂಸ್ಕರಣಾ ಘಟಕಗಳು ತ್ವರಿತವಾಗಿ ಮತ್ತೆ ರಷ್ಯಾದ ಕಚ್ಚಾ ತೈಲದತ್ತ ಮುಖ ಮಾಡುವ ಅವಕಾಶವಿದೆ. ಅಲ್ಲದೆ, ಅತ್ಯಂತ ಕಠಿಣ ಪರಿಸ್ಥಿತಿ ನಿರ್ಮಾಣವಾದರೆ ಭಾರತವು ತುರ್ತು ಬಳಕೆಗಾಗಿ ಕಾದಿರಿಸಿರುವ ತನ್ನ ‘ಕಾರ್ಯಾಚರಣೆ ತೈಲ ನಿಕ್ಷೇಪ’ (Strategic Petroleum Reserves) ಗಳನ್ನು ಬಳಸಿಕೊಳ್ಳುವ ಮೂಲಕ ಅಲ್ಪಾವಧಿಯ ತೈಲ ಬಿಕ್ಕಟ್ಟನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ : ಇರಾನ್-ಇಸ್ರೇಲ್ ಸಂಘರ್ಷ | ದುಬೈನಲ್ಲಿ ಬಳ್ಳಾರಿ ಮೂಲದ 35 ಜನ ಲಾಕ್



















