ಟೋಂಕ್ (ರಾಜಸ್ಥಾನ) : ರಾಜಸ್ಥಾನದ ಬಿಜೆಪಿ ನಾಯಕ, ಟೋಂಕ್ ಸವಾಯಿ ಮಾಧೋಪುರ್ ಕ್ಷೇತ್ರದ ಮಾಜಿ ಸಂಸದ ಸುಖಬೀರ್ ಸಿಂಗ್ ಜೌನಾಪುರಿಯಾ ಅವರು ಹೊದಿಕೆಗಳನ್ನು ವಿತರಿಸುವ ವೇಳೆ ಮುಸ್ಲಿಂ ಮಹಿಳೆಯರನ್ನು ಹೊರಹಾಕಿರುವ ವಿಡಿಯೋ ಇದೀಗ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವವರಿಗೆ ಹೊದಿಕೆ ಪಡೆಯುವ ಹಕ್ಕಿಲ್ಲ ಎಂದು ಹೇಳುವ ಮೂಲಕ ಅವರು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹೆಸರು ಕೇಳಿ ಹೊದಿಕೆ ವಾಪಸ್ ಪಡೆದ ನಾಯಕ
ಘಟನೆಯ ವಿಡಿಯೋದಲ್ಲಿ ಸುಖಬೀರ್ ಸಿಂಗ್ ಅವರು ಬಡ ಮಹಿಳೆಯರಿಗೆ ಹೊದಿಕೆಗಳನ್ನು ಹಂಚುತ್ತಿರುವುದು ಕಂಡುಬರುತ್ತದೆ. ಈ ವೇಳೆ ಒಬ್ಬ ಮಹಿಳೆಯ ಹೆಸರು ಕೇಳಿದಾಗ ಆಕೆ ಮುಸ್ಲಿಂ ಹೆಸರನ್ನು ಹೇಳುತ್ತಾಳೆ. ತಕ್ಷಣವೇ ತಮ್ಮ ಬೆಂಬಲಿಗರಿಗೆ ಆಕೆಗೆ ಹೊದಿಕೆ ನೀಡದಂತೆ ಸೂಚಿಸಿದ ಮಾಜಿ ಸಂಸದರು, “ಯಾರು ಮೋದಿಯವರನ್ನು ಬೈಯುತ್ತಾರೋ ಅವರಿಗೆ ಹೊದಿಕೆ ಪಡೆಯುವ ಹಕ್ಕಿಲ್ಲ. ನಿಮಗೆ ಸಿಟ್ಟು ಬಂದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿ ಅವರನ್ನು ಅಲ್ಲಿಂದ ಹೊರಹೋಗುವಂತೆ ಸೂಚಿಸುತ್ತಾರೆ. ಗಂಟೆಗಟ್ಟಲೆ ಕಾಯುತ್ತಿದ್ದ ಮಹಿಳೆಯರನ್ನು ಖಾಲಿ ಕೈಯಲ್ಲಿ ಕಳುಹಿಸಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ, ಮಾಜಿ ಸಂಸದರು ಅದಕ್ಕೆ ಕ್ಯಾರೇ ಅಂದಿಲ್ಲ.
ಸಂವಿಧಾನಕ್ಕೆ ಮಾಡಿದ ಅವಮಾನ ಎಂದ ಕಾಂಗ್ರೆಸ್
ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಹರೀಶ್ ಚಂದ್ರ ಮೀನಾ, ಇದು ದೇಶದ ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುವ ಕೃತ್ಯ ಎಂದು ಕಿಡಿಕಾರಿದ್ದಾರೆ. ಬಡವರ ಧರ್ಮ ಕೇಳಿ ಸಹಾಯ ನಿರಾಕರಿಸುವುದು ಅಮಾನವೀಯ ಮತ್ತು ಇದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಅವರು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿಯವರು ಕೂಡಲೇ ಈ ನಾಯಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಕೂಡ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ವೈಯಕ್ತಿಕ ಕಾರ್ಯಕ್ರಮ ಎಂದು ಸಮರ್ಥನೆ
ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸುಖಬೀರ್ ಸಿಂಗ್ ಜೌನಾಪುರಿಯಾ, ತಾನು ಈ ಹೊದಿಕೆಗಳನ್ನು ವೈಯಕ್ತಿಕ ಸಾಮರ್ಥ್ಯದಲ್ಲಿ ಹಂಚುತ್ತಿದ್ದು, ಇದಕ್ಕೆ ಯಾವುದೇ ಸರ್ಕಾರಿ ಅನುದಾನ ಬಳಸಿಲ್ಲ ಎಂದು ಹೇಳಿದ್ದಾರೆ. ಆದರೆ, ಸಾರ್ವಜನಿಕ ಪ್ರತಿನಿಧಿಯಾಗಿ ಕೆಲಸ ಮಾಡಿದವರೊಬ್ಬರು ಈ ರೀತಿ ತಾರತಮ್ಯ ಎಸಗಿರುವುದು ರಾಜಸ್ಥಾನದ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಸ್ತುತ ರಾಜಸ್ಥಾನ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಈ ವಿಷಯವನ್ನಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ನಥಿಂಗ್ನಿಂದ ಬಜೆಟ್ ಸ್ನೇಹಿ ಹೆಡ್ಫೋನ್ | ಶೀಘ್ರದಲ್ಲೇ ಮಾರುಕಟ್ಟೆಗೆ!



















