ಗಾಂಧಿನಗರ : ಗುಜರಾತ್ನಲ್ಲಿ ಪ್ರೇಮ ವಿವಾಹ ಮಾಡಿಕೊಳ್ಳ ಬಯಸುವ ಪ್ರೇಮಿಗಳನ್ನು ಕಾನೂನಿನ ಮೂಲಕ ಕಟ್ಟಿಹಾಕಲು ಅಲ್ಲಿನ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಪ್ರೇಮ ವಿವಾಹಗಳನ್ನು ಅಧಿಕೃತವಾಗಿ ನೋಂದಣಿ ಮಾಡಬೇಕಾದರೆ ಪೋಷಕರ ಒಪ್ಪಿಗೆ ಮತ್ತು ಅವರ ಸಹಿಯನ್ನು ಕಡ್ಡಾಯಗೊಳಿಸುವ ಹೊಸ ಕಾನೂನನ್ನು ಜಾರಿಗೆ ತರುವುದಾಗಿ ಗುಜರಾತ್ ಸರ್ಕಾರ ಘೋಷಿಸಿದೆ. ರಾಜ್ಯ ವಿಧಾನಸಭೆಯಲ್ಲೇ ಈ ಕುರಿತು ಪ್ರಸ್ತಾಪಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಇದು ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಈ ಪ್ರಸ್ತಾವನೆಯ ಬಗ್ಗೆ ಈಗಾಗಲೇ ಸುಳಿವು ನೀಡಿದ್ದರು. ಇತ್ತೀಚೆಗೆ ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಸರ್ಕಾರದ ಪ್ರತಿನಿಧಿಗಳು, ಪ್ರೇಮ ವಿವಾಹದ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಕರೆದೊಯ್ಯುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಹಲವು ಕುಟುಂಬಗಳು ಬೀದಿಗೆ ಬರುತ್ತಿವೆ. ಈ ಸಾಮಾಜಿಕ ಸಮಸ್ಯೆಯನ್ನು ತಡೆಯಲು ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದು, ವಿವಾಹದ ವೇಳೆ ಕನಿಷ್ಠ ಪಕ್ಷ ಒಬ್ಬ ಪೋಷಕರ ಸಹಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದಿದ್ದಾರೆ.
ಸ್ಥಳೀಯ ಸಾಕ್ಷಿಗಳಿಗೂ ಆದ್ಯತೆ
ಪ್ರಸ್ತುತ ಇರುವ ನಿಯಮಗಳ ಪ್ರಕಾರ, ವಿವಾಹ ನೋಂದಣಿಗೆ ಯಾವುದೇ ಸಾಕ್ಷಿಗಳಿದ್ದರೂ ನಡೆಯುತ್ತದೆ. ಆದರೆ ಹೊಸ ಪ್ರಸ್ತಾವನೆಯ ಪ್ರಕಾರ, ವಿವಾಹವು ನಡೆಯುವ ಅದೇ ತಾಲ್ಲೂಕಿನ ಅಥವಾ ಸ್ಥಳೀಯ ವ್ಯಕ್ತಿಗಳೇ ಸಾಕ್ಷಿಗಳಾಗಿರಬೇಕು ಎಂಬ ನಿಯಮವನ್ನು ಸೇರಿಸಲು ಸರ್ಕಾರ ಯೋಜಿಸಿದೆ. ಓಡಿಹೋಗಿ ಮದುವೆಯಾಗುವ ಪ್ರಕರಣಗಳಲ್ಲಿ ಅಪರಿಚಿತರನ್ನು ಸಾಕ್ಷಿಗಳನ್ನಾಗಿ ಬಳಸಿಕೊಳ್ಳುವುದನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ. ಪಾಟೀದಾರ್ ಸಮುದಾಯ ಸೇರಿದಂತೆ ರಾಜ್ಯದ ವಿವಿಧ ಸಂಘಟನೆಗಳು ಈ ರೀತಿಯ ಕಾನೂನು ತರಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಿದ್ದವು ಎನ್ನಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್ಸೈಟ್ ಮೂಲಕ ಈ ತಿದ್ದುಪಡಿಗಳ ಕುರಿತು 30 ದಿನಗಳ ಕಾಲ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಜನರ ಅಭಿಪ್ರಾಯಗಳನ್ನು ಪಡೆದ ನಂತರವಷ್ಟೇ ಅಂತಿಮ ನಿಯಮಗಳನ್ನು ರೂಪಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಈ ಕಾನೂನು ವ್ಯಕ್ತಿಯ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ ಎಂದು ಕೆಲವು ಮಾನವ ಹಕ್ಕುಗಳ ಹೋರಾಟಗಾರರು ವಾದಿಸುತ್ತಿದ್ದಾರೆ.
ಹದಿಯಾ ಪ್ರಕರಣದ ಉಲ್ಲೇಖ
ಈ ಕಾನೂನು ಜಾರಿಯಾದರೆ ಅದು ಸುಪ್ರೀಂ ಕೋರ್ಟ್ನ ಹಳೆಯ ತೀರ್ಪುಗಳೊಂದಿಗೆ ಸಂಘರ್ಷಕ್ಕಿಳಿಯುವ ಸಾಧ್ಯತೆಯಿದೆ. ಈ ಹಿಂದೆ ‘ಹದಿಯಾ’ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, “ವ್ಯಕ್ತಿಯೊಬ್ಬರು ಯಾರನ್ನು ಮದುವೆಯಾಗಬೇಕು ಮತ್ತು ಯಾರ ಜೊತೆ ಜೀವನ ನಡೆಸಬೇಕು ಎಂಬುದು ಅವರ ಸಂಪೂರ್ಣ ವೈಯಕ್ತಿಕ ಆಯ್ಕೆಯಾಗಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅಧಿಕಾರವಿಲ್ಲ” ಎಂದು ಹೇಳಿತ್ತು. ಪೋಷಕರ ಕಾಳಜಿಯ ಹೆಸರಿನಲ್ಲಿ ಮಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದೂ ಅಭಿಪ್ರಾಯಪಟ್ಟಿತ್ತು.
ಇದನ್ನೂ ಓದಿ : ‘ಮುದ್ದುಸೊಸೆ’ ಭಾರೀ ಟ್ವಿಸ್ಟ್..?



















