ಉಡುಪಿ : ತಮಿಳುನಾಡಿನ ನೂತನ ಸಿಎಂ, ನಟ ಜೋಸೆಫ್ ವಿಜಯ್ ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಶುಕ್ರವಾರ (ಜೂ.12) ಭೇಟಿ ನೀಡಲಿದ್ದಾರೆ. ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಅವರು ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೊಲ್ಲೂರಿಗೆ ಆಗಮಿಸಲಿರುವ ಸಿಎಂ ವಿಜಯ್, ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೂಕಾಂಬಿಕಾ ದೇವಿ ದರ್ಶನ, ಪೂಜಾ ಕಾರ್ಯಕ್ರಮ ಮುಗಿದ ಬಳಿಕ ಸಿಎಂ ವಿಜಯ್ ಮಂಗಳೂರಿಗೆ ತೆರಳಿ ಅಲ್ಲಿನ ವಿಮಾನ ನಿಲ್ದಾಣದಿಂದ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ. ಅವರ ಭೇಟಿಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.
ರಾಜಕೀಯ ನಾಯಕರ ಪಾಲಿಗೆ ಭಕ್ತಿ ಶ್ರದ್ಧೆಯ ಕೇಂದ್ರ ಕೊಲ್ಲೂರು
ಕರ್ನಾಟಕದ ರಾಜಕೀಯ ನಾಯಕರು, ತಮಿಳುನಾಡಿನ ರಾಜಕೀಯ ನಾಯಕರ ಪಾಲಿಗೆ ಕೊಲ್ಲೂರು ಭಕ್ತಿ ಶ್ರದ್ಧೆಯ ಕೇಂದ್ರವಾಗಿದೆ. ಎಂಜಿಆರ್ ಅವರಿಂದ ಹಿಡಿದು ಎಲ್ಲರೂ ಸಾಮಾನ್ಯವಾಗಿ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಎಂಜಿಆರ್ ಕೂಡ ಸಿಎಂ ಆಗಿದ್ದಾಗ ಕೊಲ್ಲೂರು ದೇಗುಲಕ್ಕೆ ಆಗಮಿಸಿ ಮೂಕಾಂಬಿಕೆಗೆ ಚಿನ್ನದ ಖಡ್ಗವನ್ನು ಭಕ್ತಿಯಿಂದ ಕಾಣಿಕೆಯಾಗಿ ಸಮರ್ಪಿಸಿದ್ದರು. ಅದಾದ ಮೇಲೆ ರಾಜಕೀಯ ಏಳುಬೀಳು ಕಾಣುವ ಹಂತದಲ್ಲಿ ಜಯಲಲಿತಾ ಕೂಡ ಶಕ್ತಿಪೀಠದ ಮೊರೆ ಹೋಗಿದ್ದರು. ಸಿಎಂ ಆದ ಮೇಲೆ ಜ್ಯೋತಿಷಿಗಳ ಸಲಹೆ ಮೇರೆಗೆ 2004 ರಲ್ಲಿ ಇಲ್ಲಿಗೆ ಬಂದು ವಿಶೇಷ ಚಂಡಿಕಾಯಾಗ ಮಾಡಿದ್ದರು.
ಇದನ್ನೂ ಓದಿ : ಸಿಗರೇಟ್ ಸೇದೋದನ್ನು ಕಲಿಸಿ ಬಾಲಕನಿಗೆ ಬ್ಲ್ಯಾಕ್ಮೇಲ್ – 120 ಗ್ರಾಂ ಚಿನ್ನ ದೋಚಿದ ಇಬ್ಬರ ಬಂಧನ!



















