ಮೊರಾನ್ : ಈಶಾನ್ಯ ಭಾರತದ ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಇಂದು ಹೊಸ ಇತಿಹಾಸ ನಿರ್ಮಾಣವಾಗಿದ್ದು, ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೊರಾನ್ನಲ್ಲಿರುವ ರಾಷ್ಟ್ರೀಯ ಹೆದ್ದಾರಿ-37ರ ‘ತುರ್ತು ಲ್ಯಾಂಡಿಂಗ್ ಸೌಲಭ್ಯ’ದ (ELF) ಮೇಲೆ ವಾಯುಪಡೆಯ ಬೃಹತ್ ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಇಳಿಯುವ ಮೂಲಕ ಎಲ್ಲರ ಗಮನ ಸೆಳೆದರು.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಸ್ಸಾಂಗೆ ಭೇಟಿ ನೀಡಿರುವ ಪ್ರಧಾನಿ, ಈ ಮೂಲಕ ಈಶಾನ್ಯ ರಾಜ್ಯದ ಮೊದಲ ಇಎಲ್ಎಫ್ಗೆ ಚಾಲನೆ ನೀಡಿದರು. ಚಾಬುವಾ ವಾಯುನೆಲೆಯಿಂದ ಪ್ರಯಾಣ ಬೆಳೆಸಿದ ಪ್ರಧಾನಿಯವರು, ಮೊರಾನ್ ಬೈಪಾಸ್ನಲ್ಲಿ ನಿರ್ಮಿಸಲಾದ 4.2 ಕಿಲೋಮೀಟರ್ ಉದ್ದದ ಬಲವರ್ಧಿತ ಹೆದ್ದಾರಿ ಏರ್ಸ್ಟ್ರಿಪ್ ಮೇಲೆ ಯಶಸ್ವಿಯಾಗಿ ಇಳಿದರು.
ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ತಾಂತ್ರಿಕ ಪಥವು ಕೇವಲ ರಸ್ತೆಯಲ್ಲದೆ, ಯುದ್ಧವಿಮಾನಗಳು ಮತ್ತು ಸರಕು ಸಾಗಣೆ ವಿಮಾನಗಳಿಗೆ ರನ್ವೇ ಆಗಿಯೂ ಬಳಕೆಯಾಗಲಿದೆ. ಭಾರತದ ಗಡಿ ಭಾಗಗಳಲ್ಲಿ ಮೂಲಸೌಕರ್ಯ ಬಲಪಡಿಸುವ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣಾ ಪಡೆಗಳಿಗೆ ಶಕ್ತಿ ತುಂಬುವ ಉದ್ದೇಶವನ್ನು ಇದು ಹೊಂದಿದೆ.
ವಿಪತ್ತು ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ
ಈ ಸೌಲಭ್ಯದ ಕುರಿತು ಈ ಹಿಂದೆಯೇ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಪ್ರಧಾನಿ ಮೋದಿ, “ತುರ್ತು ಸಂದರ್ಭಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತವಾಗಿ ಕೈಗೊಳ್ಳಲು ಈ ಇಎಲ್ಎಫ್ ಅತ್ಯಂತ ಸಹಕಾರಿ” ಎಂದು ತಿಳಿಸಿದ್ದರು. 40 ಟನ್ ತೂಕದ ಯುದ್ಧ ವಿಮಾನಗಳು ಹಾಗೂ 74 ಟನ್ ವರೆಗಿನ ಸರಕು ಸಾಗಣೆ ವಿಮಾನಗಳನ್ನು ನಿಭಾಯಿಸುವ ಸಾಮರ್ಥ್ಯ ಈ ಪಥಕ್ಕಿದೆ. ದಿಬ್ರುಗಢ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಕೆಲಸ ಮಾಡಲಿರುವ ಈ ತಾಣವು ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳೆರಡಕ್ಕೂ ಲಭ್ಯವಿರಲಿದೆ. ಲ್ಯಾಂಡಿಂಗ್ ನಂತರ ಪ್ರಧಾನಿ ಮೋದಿ ಅವರು ತೇಜಸ್, ಸುಖೋಯ್ ಮತ್ತು ರಫೇಲ್ ಯುದ್ಧ ವಿಮಾನಗಳ ರೋಚಕ ವೈಮಾನಿಕ ಪ್ರದರ್ಶನವನ್ನೂ ವೀಕ್ಷಿಸಿದರು.
ಅಸ್ಸಾಂ ಅಭಿವೃದ್ಧಿಗೆ ಹೊಸ ವೇಗ
ಕೇವಲ ರಕ್ಷಣಾ ವಲಯ ಮಾತ್ರವಲ್ಲದೆ, ಅಸ್ಸಾಂನ ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೂ ಪ್ರಧಾನಿ ಇಂದು ಹಲವು ಕೊಡುಗೆಗಳನ್ನು ನೀಡಲಿದ್ದಾರೆ. ಗುವಾಹಟಿ ಮತ್ತು ಉತ್ತರ ಗುವಾಹಟಿಯನ್ನು ಸಂಪರ್ಕಿಸುವ ಬ್ರಹ್ಮಪುತ್ರ ನದಿಯ ಮೇಲಿನ ಬಹುನಿರೀಕ್ಷಿತ ಸೇತುವೆಯನ್ನು ಅವರು ಉದ್ಘಾಟಿಸಲಿದ್ದಾರೆ. ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೆ, ನದಿಯ ಎರಡು ದಡಗಳ ನಡುವಿನ ಸಂಪರ್ಕವನ್ನು ಸುಗಮಗೊಳಿಸಲಿದೆ. ಇದರೊಂದಿಗೆ ಬೊಂಗೊರಾದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಗುವಾಹಟಿಯ ತಾತ್ಕಾಲಿಕ ಆವರಣವನ್ನು ಉದ್ಘಾಟಿಸಿ, ನಗರದ ಸಾರಿಗೆ ವ್ಯವಸ್ಥೆ ಸುಧಾರಿಸಲು 100 ಎಲೆಕ್ಟ್ರಿಕ್ ಬಸ್ಗಳಿಗೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ : ಉಡುಪಿ ನಗರಸಭೆಯಲ್ಲಿ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ವಂಚನೆ | ಇಬ್ಬರ ಬಂಧನ



















