ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ 16 ವರ್ಷದ ಮುಸ್ಲಿಂ ಯುವತಿ ಹಾಗೂ 24 ವರ್ಷದ ವೆಂಕಟೇಶ್ ಎಂಬ ಹಿಂದೂ ಯುವಕನ ನಡುವೆ ಪ್ರೀತಿಯ ಸಂಬಂಧ ಇದ್ದ ಆರೋಪದ ಹಿನ್ನೆಲೆ ಗಲಾಟೆ ನಡೆದಿದೆ. ನಿನ್ನೆ ತಡರಾತ್ರಿ ಬೈಕ್ನಲ್ಲಿ ಯುವಕ–ಯುವತಿ ತೆರಳುತ್ತಿದ್ದ ವೇಳೆ ಕೆಲವು ಮುಸ್ಲಿಂ ಯುವಕರು ತಡೆದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಬುರ್ಕಾದಲ್ಲಿ ಇದ್ದ ಯುವತಿಯನ್ನು ಗಮನಿಸಿ, ಯುವತಿ ಅಪ್ರಾಪ್ತಳಾಗಿರುವ ಹಿನ್ನೆಲೆಯಲ್ಲಿ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಈ ಘಟನೆಯಲ್ಲಿ ತನ್ನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ ಎಂದು ವೆಂಕಟೇಶ್ ಗಂಗಾವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೆಂಕಟೇಶ್ ದೂರಿನ ಆಧಾರದ ಮೇಲೆ ಸುಮಾರು 10 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೇ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ ಕೇವಲ ಪ್ರಶ್ನೆ ಮಾಡಿದುದನ್ನೇ ಕೋಮು ವಿವಾದವನ್ನಾಗಿ ಮಾಡಲಾಗಿದೆ ಎಂದು ಮುಸ್ಲಿಂ ಯುವಕರು ಆರೋಪಿಸಿದ್ದಾರೆ. ಪರಿಶೀಲನೆ ನಡೆಸದೇ ತರಾತುರಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಗಂಗಾವತಿ ಠಾಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆ ಗಂಗಾವತಿ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಮುಖಂಡರು ಹಾಗೂ ಯುವಕರು ಜಮಾಯಿಸಿ ಪ್ರತಿಭಟನೆ ನಡೆಸಿದರು. ವೆಂಕಟೇಶ್ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು. ಕೇವಲ ಮುಸ್ಲಿಂ ಯುವಕರ ವಿರುದ್ಧ ಮಾತ್ರ ಪ್ರಕರಣ ದಾಖಲು ಮಾಡಿರುವುದು ಯಾಕೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಪೊಲೀಸ್ ಅಧಿಕಾರಿ ಪ್ರಕಾಶ್ ಮಾಳೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಭಾರತದ ವಿರುದ್ಧ ಆಡದಿದ್ದರೆ ಪಾಕಿಸ್ತಾನ ಕ್ರಿಕೆಟ್ ಬರ್ಬಾದ್? ಪಿಸಿಬಿಗೆ ಕಾದಿದೆ ಕೋಟಿ ಕೋಟಿ ನಷ್ಟದ ಭೀತಿ!



















