ಬೆಂಗಳೂರು : ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಗೆ ಕೇಂದ್ರ ಚುನಾವಣಾ ಆಯೋಗ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಭೇಟಿ ಬಳಿಕ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕಾದ ಹಲವು ಹೊಸ ನಿಯಮಗಳನ್ನು ಸೂಚಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿನ ಗೊಂದಲ ನಿವಾರಣೆಗೆ ಒತ್ತು ನೀಡಲಾಗಿದೆ.
ಹೊಸ ಮಾರ್ಗಸೂಚಿಯಂತೆ, ಮನೆ-ಮನೆ ಭೇಟಿ ವೇಳೆ ಮತದಾರರು ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವುದು ಕಂಡುಬಂದರೆ ಅವರಿಗೆ ನಮೂನೆ-6 ವಿತರಿಸಿ, ಪ್ರಸ್ತುತ ವಾಸಿಸುವ ಸ್ಥಳದ ವಿಳಾಸದ ಆಧಾರದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳುವಂತೆ ತಿಳಿಸಬೇಕು. ಸ್ಥಳಾಂತರಗೊಂಡ ಮತದಾರರ ವಿವರಗಳನ್ನು ಬೂತ್ ಮಟ್ಟದ ಏಜೆಂಟರಿಗೆ (BLA) ತಿಳಿಸಿ, ಅವರ ಸಮ್ಮುಖದಲ್ಲೇ ಮಹಜರ್ ನಡೆಸಬೇಕು. ಈ ಪ್ರಕ್ರಿಯೆಯ ಸಭೆಗಳ ಫೋಟೋ ಹಾಗೂ ವಿಡಿಯೊ ದಾಖಲಾತಿ ಮಾಡಿ, ಅದರ ವರದಿಯನ್ನು ಸಿದ್ಧಪಡಿಸಿ ಒಂದು ಪ್ರತಿಯನ್ನು BLO Appನಲ್ಲಿ ಅಪ್ಲೋಡ್ ಮಾಡುವಂತೆ ಸೂಚಿಸಲಾಗಿದೆ.
ಮತಗಟ್ಟೆ ಮೇಲ್ವಿಚಾರಕರು, BLO ಹಾಗೂ BLAಗಳ ನಡುವೆ ಸಮನ್ವಯಕ್ಕಾಗಿ ನಿಯಮಿತ ಸಭೆಗಳನ್ನು ನಡೆಸಬೇಕು. ಅನುಪಸ್ಥಿತ, ಸ್ಥಳಾಂತರಗೊಂಡ, ಮೃತ ಹಾಗೂ ರದ್ದುಪಡಿಸಿದ (ASDD) ಮತದಾರರ ಮಾಹಿತಿಯನ್ನು ಡಿಜಿಟಲೀಕರಣ ಪೂರ್ಣಗೊಳ್ಳುವ ಮೊದಲು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಂಡು ಗೊಂದಲ ನಿವಾರಣೆ ಮಾಡಬೇಕು. ಕ್ಲಸ್ಟರ್ ಮತಗಟ್ಟೆಗಳಲ್ಲಿ ASDD ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕಾಗಿದೆ.
ಇದಲ್ಲದೆ, ಮುಂದಿನ ಮೂರು ದಿನಗಳೊಳಗೆ ಎಲ್ಲಾ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಕ್ಲಸ್ಟರ್ ಮತಗಟ್ಟೆಗಳು ಹಾಗೂ ಮತದಾರರ ಸೌಲಭ್ಯ ಕೇಂದ್ರಗಳು (VFC) ಸಾರ್ವತ್ರಿಕ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಅಗತ್ಯ ಪ್ರಮಾಣದಲ್ಲಿ ನಮೂನೆ-6ಗಳನ್ನು BLOಗಳಿಗೆ ಒದಗಿಸುವ ಜವಾಬ್ದಾರಿ ಮತದಾರರ ನೋಂದಣಾಧಿಕಾರಿಗಳದ್ದಾಗಿರಲಿದೆ. ಈ ಹೊಸ ಮಾರ್ಗಸೂಚಿಗಳ ಮೂಲಕ SIR ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ, ಸಮನ್ವಯಯುತ ಹಾಗೂ ಗೊಂದಲರಹಿತವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಒತ್ತು ನೀಡಿದೆ.
ಇದನ್ನೂ ಓದಿ : 9 ಲೆವೆನ್ ಫಾರಂ ಕೊಡಲು ಸಾವಿರ ಸಾವಿರ ಲಂಚ ; ಸೋವಿನಹಳ್ಳಿ ಪಿಡಿಓ ವಿರುದ್ಧ ಗಂಭೀರ ಆರೋಪ!


















