ಕಲಬುರಗಿ : ಕಲಬುರಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಜಗತ್ ವೃತ್ತದ ಬಳಿ ಹೆಲಿಕಾಪ್ಟರ್ ಮೂಲಕ ಅಂಬಿಗರ ಚೌಡಯ್ಯನವರ ಮೂರ್ತಿಗೆ ಗುಲಾಬಿ ಹೂಗಳ ಪುಷ್ಪವೃಷ್ಠಿ ನೆರವೇರಿಸಿ ವಿಶೇಷ ಗೌರವ ಸಲ್ಲಿಸಲಾಯಿತು.
ಪುಷ್ಪವೃಷ್ಠಿಗೂ ಮುನ್ನ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಬೃಹತ್ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಹೊತ್ತು ಭಕ್ತರು ಭಾಗಿ ಆಗಿದ್ದು, ನಗರದೆಲ್ಲೆಡೆ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.
ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದು, ಒಂಟೆ, ಕುದುರೆಗಳೊಂದಿಗೆ ಪುರುಷ ಹಾಗೂ ಮಹಿಳಾ ತಂಡಗಳಿಂದ ಮನಮೋಹಕ ಕಲಾ ಪ್ರದರ್ಶನಗಳು ನಡೆದವು. ಜನಸಾಗರವೇ ಹರಿದು ಬಂದಂತೆ ಕಂಡುಬಂದ ಈ ಜಯಂತೋತ್ಸವ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು.
ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಗಳು ಮತ್ತು ವಚನ ಪರಂಪರೆಯನ್ನು ಸ್ಮರಿಸುವ ಮೂಲಕ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದನ್ನೂ ಓದಿ : ‘ಕಾಂತಾರ ಚಾಪ್ಟರ್-1’ ಜೀ ಕನ್ನಡದಲ್ಲಿ..!



















