ಬೆಂಗಳೂರು: ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮೀಸಲಾಗಿರುವ ಜಾಗ ಎಂದು ಬೆಂಗಳೂರು ನಗರ ಜಿಲ್ಲೆಯ ಯಲಹಂಕದ ಕೋಗಿಲು ಬಡಾವಣೆಯ ಬಂಡೆ ಬಳಿ ನಿರ್ಮಿಸಲಾಗಿದ್ದ150ಕ್ಕೂ ಹೆಚ್ಚು ಶೆಡ್ಗಳನ್ನು ಜಿಬಿಎ(GBA) ಅಧಿಕಾರಿಗಳು ಕಳೆದ ಶನಿವಾರ ತೆರವುಗೊಳಿಸಿದ ಹಿನ್ನಲೆ 300 ಕುಟುಂಬಗಳು ನಿರಾಶ್ರಿತವಾಗಿ ತಮ್ಮ ನೆಲೆ ಕಳೆದುಕೊಂಡಿದ್ದಾರೆ.
ಜಿಬಿಎ ಯಾವುದೇ ಸೂಚನೆ ಅಥವಾ ನೋಟಿಸ್ ಕೊಡದೇ ಮನೆಗಳನ್ನು ಕೆಡವಿದ್ದರಿಂದ ಕುಟುಂಬಗಳು ಬೀದಿಗೆ ಬಿದ್ದಿವೆ. ಸದ್ಯ ಕರ್ನಾಟಕ ರಾಜ್ಯ ಮಕ್ಕಳ ಆಯೋಗ ನಿರಾಶ್ರಿತರ ರಕ್ಷಣೆಗೆ ಮುಂದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರುದ್ಧ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಬಿಎ ವಿರುದ್ಧ ರಾಜ್ಯ ಮಕ್ಕಳ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಮನೆಗಳ ತೆರವಿನಿಂದ ಮಕ್ಕಳು ಮತ್ತು ಬಾಣಂತಿಯರು ವಸತಿ ಹೀನರಾಗಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಸುಮೋಟೋ ಕೇಸ್ ದಾಖಲಿಸಲಾಗಿದೆ. ವಾತಾವರಣ ಏರುಪೇರಿನಿಂದ 500ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇನ್ನು ಏಕಾಏಕಿ ಮನೆ ಕೆಡವಿದ್ದರಿಂದ ಆಕ್ರೋಶಗೊಂಡ ನಿರಾಶ್ರಿತರು ಭಾನುವಾರ ಸಚಿವ ಕೃಷ್ಣಭೈರೇಗೌಡ ನಿವಾಸಕ್ಕೆ ಮುತ್ತಿಗೆ ಹಾಕಲ ಯತ್ನಿಸಿದ್ದರು. ನಂತರ ಸಚಿವರು ಸೋಮವಾರ ಕೆಲ ನಿವಾಸಿಗಳೊಂದಿಗೆ ಸಭೆ ನಡೆಸಿ, ಜಿಬಿಎ ಹಾಗೂ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸುವುದಾಗಿ ಸಚಿವರು ಹೇಳಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಹಾಗೂ ಕೆಲ ಸದಸ್ಯರು ಹೇಳುತ್ತಾರೆ. ಈ ಬಗ್ಗೆ ವಸತಿ ಸಚಿವರೊಂದಿಗೆ ಮಾತನಾಡಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ಅರ್ಹರಿಗೆ ವಸತಿ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.
ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಆರ್ ಕಲೀಮುಲ್ಲಾ, ಅನೇಕ ವಯೋವೃದ್ಧರು ಸಹ-ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ, ಈ ಹಿಂದೆ ಪ್ರಭಾವಿಗಳ ಅತಿಕ್ರಮಣ ಹಾಗೂ ಸರ್ಕಾರದಿಂದ ಹಿಂಪಡೆದಿರುವ ಉದಾಹರಣೆಗಳನ್ನು ಉಲ್ಲೇಖಿಸಿ ಕಂದಾಯ ಸಚಿವರು ಧ್ವಂಸಗೊಳಿಸಿರುವುದನ್ನು ಸಮರ್ಥಿಸಿಕೊಂಡರು.ಆದರೆ, ಈ ಬಗ್ಗೆ ಜಿಬಿಎ ಮತ್ತು ಕಂದಾಯ ಇಲಾಖೆಯೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ ಸಚಿವರು, ಭೂಮಿಯನ್ನು ಮತ್ತೆ ಕಂದಾಯ ಇಲಾಖೆಗೆ ವರ್ಗಾಯಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸಚಿವರು ಆಶ್ರಯ ವ್ಯವಸ್ಥೆ ಮಾಡಲು ಮೂರು ತಿಂಗಳು ಬೇಕಾಗಬಹುದು ಎನ್ನುತ್ತಿದ್ದು, ಸರ್ಕಾರವು ಉಚಿತ ಆಹಾರವನ್ನು ನೀಡಬೇಕು ಮತ್ತು ಆರೋಗ್ಯ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಿಲ್ಲದ ಪುಂಡರ ಹಾವಳಿ | ರಸ್ತೆ ಅಡ್ಡಗಟ್ಟಿ ಬರ್ತಡೇ ಸೆಲೆಬ್ರೇಷನ್



















