ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಬೈಂದೂರಿನ ರೈತರ ಹೋರಾಟದ ಪರ ಇಂದು ಶಾಸಕ ಗುರುರಾಜ್ ಗಂಟಿಹೊಳೆ ಅವರು ಧ್ವನಿ ಎತ್ತಿದ್ದಾರೆ.
ಬೈಂದೂರು ಗ್ರಾಮೀಣ ಭಾಗದ ರೈತರಿಗೆ ಪಟ್ಟಣ ಪಂಚಾಯತ್ ವ್ಯಾಪ್ತಿ ಸೇರ್ಪಡೆಯಿಂದಾಗಿ ಆಗುತ್ತಿರುವ ತೊಂದರೆ ಹಾಗೂ ಕಳೆದ ಹಲವು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆ ಕುರಿತು ಶಾಸಕರು ಸದನಕ್ಕೆ ವಿವರಿಸಿದ್ದಾರೆ.

ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನ ಕೈ ಬಿಡುವಂತೆ ಸದನದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮನವಿ ಮಾಡಿದ್ದು, ನಮ್ಮ ಭಾಗದ ಸಾವಿರಾರು ರೈತರಿಗೆ ಅನ್ಯಾಯ ಆಗುತ್ತಿದೆ, ದಯವಿಟ್ಟು ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.

ಇದೇ ವೇಳೆ ಪಟ್ಟಣ ಪಂಚಾಯತ್ ಮಿತಿಯನ್ನು ಮರು ನಿಗದಿಗೊಳಿಸಿದ ನಂತರವೂ ಬಫರ್ ಝೋನ್ ಮಿತಿಯಿಂದ ಗ್ರಾಮೀಣ ರೈತರು ಸರ್ಕಾರದ ವಿವಿಧ ಭೂ ಮಂಜೂರಾತಿ ಹಾಗೂ ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುವುದರಿಂದ ಬಫರ್ ಝೋನ್ ಮಿತಿಯನ್ನು ಕೈಬಿಡಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಶಾಸಕರು ಪ್ರಶ್ನಿಸಿದ್ದಾರೆ.
ಹಾಗೆಯೇ ಪಟ್ಟಣ ಪಂಚಾಯತ್ ವಿಂಗಡನೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ಗ್ರಾಮಾಂತರ ಪ್ರದೇಶಗಳ 94ಸಿ, ಅಕ್ರಮ ಸಕ್ರಮ, ರೈತರ ಕೆಲಸ ಹೀಗೆ ಎಲ್ಲದಕ್ಕೂ ಹಿನ್ನಡೆಯಾಗುತ್ತದೆ. ಹಿಂದೆ ಮಾಡಿದ ತಪ್ಪುಗಳನ್ನು ಈಗ ಸರಿಪಡಿಸದೇ ಇದ್ದರೆ ಭವಿಷ್ಯದಲ್ಲೂ ಸಂಕಟಪಡಬೇಕಾಗುತ್ತದೆ ಸದನಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿವರಿಸಿದ್ದಾರೆ.
ಇದನ್ನೂ ಓದಿ : ಕೊಪ್ಪಳದಲ್ಲಿ ಭೀಕರ ಸಿಲಿಂಡರ್ ಸ್ಫೋಟ | ಇಡೀ ಮನೆ ನೆಲಸಮ.. 7 ಮಂದಿಗೆ ಗಂಭೀರ ಗಾಯ!



















