ನವದೆಹಲಿ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಉಂಟಾಗಿರುವ ತಾಂತ್ರಿಕ ಹಾಗೂ ಸಿಬ್ಬಂದಿ ಸಮಸ್ಯೆಯಿಂದಾಗಿ ಒಂದೇ ದಿನ ಬರೋಬ್ಬರಿ 500ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ. ಇಂಡಿಗೋ ಸಂಸ್ಥೆಯ 20 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿಮಾನಗಳು ರದ್ದಾಗಿದ್ದು, ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ವಿಮಾನಗಳ ರದ್ದತಿಯಿಂದಾಗಿ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿಯೇ ಅತಂತ್ರರಾಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯ ಬ್ಯಾಗ್ಗಳು ಮತ್ತು ಸೂಟ್ಕೇಸ್ಗಳು ಟರ್ಮಿನಲ್ನಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. 12 ಗಂಟೆಗೂ ಹೆಚ್ಚು ಕಾಲ ಕಾದು ಸುಸ್ತಾದ ಪ್ರಯಾಣಿಕರಿಗೆ ಕನಿಷ್ಠ ನೀರು, ಆಹಾರದ ವ್ಯವಸ್ಥೆಯೂ ಇಲ್ಲದಂತಾಗಿದ್ದು, ಅನೇಕರು ನಿಲ್ದಾಣದ ನೆಲದ ಮೇಲೆಯೇ ಮಲಗುವ ಪರಿಸ್ಥಿತಿ ಎದುರಾಗಿದೆ. ಸಿಬ್ಬಂದಿಯಿಂದ ಯಾವುದೇ ಸಮರ್ಪಕ ಮಾಹಿತಿ ಸಿಗದೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

“ಇದು ಇಂಡಿಗೋ ನೀಡುತ್ತಿರುವ ಮಾನಸಿಕ ಕಿರುಕುಳ,” ಎಂದು ಪ್ರಯಾಣಿಕರೊಬ್ಬರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. “ನಾವು ಮದುವೆ ಸಮಾರಂಭಕ್ಕೆ ಹೋಗಬೇಕಿತ್ತು, ಆದರೆ ಕಳೆದ 12 ಗಂಟೆಗಳಿಂದ ಇಲ್ಲೇ ಕಾಯುತ್ತಿದ್ದೇವೆ. ನಮ್ಮ ಲಗೇಜ್ ಕೂಡ ನಮ್ಮ ಕೈ ಸೇರಿಲ್ಲ. ಸಿಬ್ಬಂದಿ ಪ್ರತಿ ಬಾರಿಯೂ ವಿಮಾನ ವಿಳಂಬವಾಗಲಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ,” ಎಂದು ಅವರು ದೂರಿದ್ದಾರೆ. ಹೈದರಾಬಾದ್ನಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಅಲ್ಲಿ ಸಿಟ್ಟಿಗೆದ್ದ ಪ್ರಯಾಣಿಕರು ಏರ್ ಇಂಡಿಯಾ ವಿಮಾನವೊಂದನ್ನು ತಡೆದು ಪ್ರತಿಭಟಿಸಿದ ಘಟನೆಯೂ ವರದಿಯಾಗಿದೆ.
ಗೋವಾ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಚೆನ್ನೈನಲ್ಲಿ ನೂರಾರು ಪ್ರಯಾಣಿಕರು ಸಿಲುಕಿಕೊಂಡಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಇಂಡಿಗೋ ಪ್ರಯಾಣಿಕರಿಗೆ ಪ್ರವೇಶ ನಿರಾಕರಿಸಿದೆ. ಪುಣೆ ಮತ್ತು ವಿಶಾಖಪಟ್ಟಣಂ ವಿಮಾನ ನಿಲ್ದಾಣಗಳಲ್ಲಿಯೂ ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ. ದೆಹಲಿಯಲ್ಲಿ 225, ಮುಂಬೈನಲ್ಲಿ 104 ಮತ್ತು ಬೆಂಗಳೂರಿನಲ್ಲಿ 102 ವಿಮಾನಗಳು ರದ್ದುಗೊಂಡಿವೆ ಎಂದು ವರದಿಯಾಗಿದೆ.

ಹೊಸ ನಿಯಮಗಳ ಅಡಿಯಲ್ಲಿ ಸಿಬ್ಬಂದಿಯ ಅಗತ್ಯವನ್ನು ಅಂದಾಜು ಮಾಡುವಲ್ಲಿ ಆದ ವೈಫಲ್ಯ ಮತ್ತು ಚಳಿಗಾಲದ ಹವಾಮಾನ ವೈಪರೀತ್ಯವೇ ಈ ಅವ್ಯವಸ್ಥೆಗೆ ಕಾರಣ ಎಂದು ಇಂಡಿಗೋ ಒಪ್ಪಿಕೊಂಡಿದೆ. ಮುಂದಿನ ಎರಡು-ಮೂರು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಸಂಸ್ಥೆ ಎಚ್ಚರಿಸಿದ್ದು, ಡಿಸೆಂಬರ್ 8ರಿಂದ ವಿಮಾನಗಳ ಕಾರ್ಯಾಚರಣೆಯನ್ನು ಕಡಿತಗೊಳಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿರ್ಧರಿಸಿದೆ. ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ಇಂಡಿಗೋ ಸಂಸ್ಥೆ ಕ್ಷಮೆಯಾಚಿಸಿದೆ.
ಇದನ್ನೂ ಓದಿ: ಇಂಡಿಗೋ ವಿಮಾನ ರದ್ದು : ಹುಬ್ಬಳ್ಳಿಯ ಆರತಕ್ಷತೆಗೆ ಆನ್ಲೈನ್ ಮೂಲಕ ಹಾಜರಾದ ನವಜೋಡಿ!



















