ಶಿವಮೊಗ: ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ನಿರ್ದೇಶಕ ಸಂಗೀತ್ ಸಾಗರ್ ಅವರು ಬುಧವಾರ ಸಾವನ್ನಪ್ಪಿದ್ದಾರೆ.
ಹರಿಹರಪುರದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಹೃದಯಾಘಾತದಿಂದ ಸಂಗೀತ್ ಸಾಗರ್ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

‘ಪಾತ್ರಧಾರಿ’ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ಆ್ಯಕ್ಷನ್ ಹೇಳಿದ್ದರು. ಆ ವೇಳಗಾಗಲೇ ಸುಸ್ತಾಗಿ ಸಂಗೀತ್ ಸಾಗರ್ ಕುಸಿದಿದ್ದಾರೆ. ಸಕಲೇಶಪುರದ ದೊಡ್ಡನಾಗರ ಮೂಲದವರಾದ ಸಂಗೀತ್ ಸಾಗರ್, ಸಿನಿಮಾದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಎಂಟಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ಇವರು ನಿರ್ದೇಶಿಸಿದ್ದಾರೆ.

20 ದಿನಗಳಿಂದ ಹರಿಹರಪುರ, ತೀರ್ಥಹಳ್ಳಿ ತಾಲೂಕು ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಇಂದು ಕುಂಬಳಕಾಯಿ ಶಾಸ್ತ್ರ ಮಾಡಿ ಕೊನೆಯ ಚಿತ್ರೀಕರಣ ಮಾಡಬೇಕಿತ್ತು.
ಇದನ್ನೂ ಓದಿ: ಚಿತ್ರದುರ್ಗ | ಬೈಕ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ : ಓರ್ವ ಸಾವು



















