ನವದೆಹಲಿ : ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ್ದ ಕಾರು ಬಾಂಬ್ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎನ್ಐಎ ಇದೀಗ ಮತ್ತೋರ್ವ ಆರೋಪಿಯನ್ನುಅರೆಸ್ಟ್ ಮಾಡಿದೆ. ಆ ಮೂಲಕ ಈ ಭೀಕರ ಕೃತ್ಯದ ಬಂಧಿತ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ. ಕಾರು ಸ್ಪೋಟ ಸಂಭವಿಸುವ ಮುನ್ನ ಉಮರ್ ನಬಿಗೆ ಆಶ್ರಯ ನೀಡಿದ್ದ ಆರೋಪದ ಹಿನ್ನೆಲೆ ಫರಿದಾಬಾದ್ ನಿವಾಸಿಯೊಬ್ಬನನ್ನು ಬಂಧಿಸಲಾಗಿದೆ.
ಬಂಧಿತನನ್ನು ಸೋಯಾಬ್ ಎಂದು ಗುರುತಿಸಲಾಗಿದ್ದು, ಈತ ಪ್ರಕರಣದ 7ನೇ ಆರೋಪಿಯಾಗಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಾಹಿತಿ ನೀಡಿದೆ. ಕಾರು ಸ್ಪೋಟ ಸಂಭವಿಸುವ ಮುನ್ನ ಈತ ಉಮರ್ ನಬಿಗೆ ಆಶ್ರಯ ಒದಗಿಸಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಎರಡನೇ ಆರೋಪಿ ಡಾ. ಮುಜಮ್ಮಿಲ್ ಶಕೀಲ್ನ್ನು ಕರೆದುಕೊಂಡು ಸೋಯಾಬ್ ನಿವಾಸಕ್ಕೆ ತನಿಖಾ ಅಧಿಕಾರಿಗಳು ಭೇಟಿ ನೀಡಿದ್ದರು. ನಂತರ ಆತನನ್ನು ವಶಕ್ಕೆ ಪಡೆದಿದ್ದಾರೆ. ಈತನ ಮನೆಯಲ್ಲಿ ಸ್ಫೋಟಕ ತಯಾರಿಸುವ ಕೆಲವೊಂದು ಸಲಕರಣೆಗಳು ಪತ್ತೆಯಾಗಿದ್ದು, ಅವುಗಳನ್ನು ಸೀಜ್ ಮಾಡಲಾಗಿದೆ.
ಬಂಧಿತ 7ನೇ ಆರೋಪಿ ಸೋಯಾಬ್ ಅಲ್ ಫಲಾಹ್ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಯಾಗಿದ್ದು, ಈ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಎನ್ಐಎ ಈತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಬಂಧಿತ 7 ಆರೋಪಿಗಳು
- ಅಮೀರ್ ರಶೀದ್ ಅಲಿ: ಈತ ಬಾಂಬ್ ದಾಳಿಯಲ್ಲಿ ಬಳಸಲಾದ ಕಾರನ್ನು ಖರೀದಿಸಲು ಸಹಾಯ ಮಾಡಿದ್ದು, ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ.
- ಜಾಸಿರ್ ಬಿಲಾಲ್ ವನಿ: ಡ್ಯಾನಿಶ್ ಡ್ರೋನ್ಗಳು ಮತ್ತು ರಾಕೆಟ್ ಸೇರಿದಂತೆ ತಾಂತ್ರಿಕ ಬೆಂಬಲ ನೀಡಿದ್ದ ಎನ್ನಲಾಗಿದೆ.
- ಡಾ. ಮುಝಮ್ಮಿಲ್ ಶಕೀಲ್ ಗನೈ (ಪ್ರಮುಖ ಆರೋಪಿ): ಐಇಡಿ (ಸ್ಪೋಟಕ) ತಯಾರಿಕೆಯಲ್ಲಿ ಭಾಗಿಯಾಗಿದ್ದಾನೆ.
- ಡಾ. ಅದೀಲ್ ಅಹ್ಮದ್ ರಾಥರ್
- ಡಾ. ಶಾಹೀನ್ ಸಯೀದ್ (ಪ್ರಮುಖ ಆರೋಪಿ) ಬಾಂಬ್ ತಯಾರಿಕೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
- ಮುಫ್ತಿ ಇರ್ಫಾನ್ ಅಹ್ಮದ್ ವಾಗೆ (ಪ್ರಮುಖ ಆರೋಪಿ) ದಾಳಿಕೋರರಿಗೆ ಮಾರ್ಗದರ್ಶನ ಮತ್ತು ಕಾರ್ಯತಂತ್ರದ ಬೆಂಬಲವನ್ನು ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
- ಸೋಯಾಬ್ ಬಾಂಬರ್ ಉಮರ್ ಉನ್ ನಬಿಗೆ ಆಶ್ರಯ ಒದಗಿಸಿರುವ ಹಿನ್ನಲೆ ಆತನ್ನನ್ನು ಸದ್ಯ ಬಂಧಿಸಲಾಗಿದೆ.
ಇದನ್ನೂ ಓದಿ : ಮುಂಬೈ ಭಯೋತ್ಪಾದಕ ದಾಳಿಗೆ 17 ವರ್ಷ | ಕರಾಳ ದಿನ ನೆನೆದ ದೇಶದ ಜನತೆ.. ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ



















