ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಪುನರ್ರಚಿಸಲು ಸಿದ್ಧತೆ ನಡೆಸಿವೆ. ನವೆಂಬರ್ 15ರೊಳಗೆ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತನ್ನ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾದ ವೆಂಕಟೇಶ್ ಅಯ್ಯರ್ ಅವರನ್ನು ಹರಾಜಿಗೆ ಬಿಡುಗಡೆ ಮಾಡಲು ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ‘ಕ್ರಿಕ್ಬಝ್’ ವರದಿ ಮಾಡಿದೆ.
ಕಳಪೆ ಪ್ರದರ್ಶನ ಮತ್ತು ದುಬಾರಿ ಬೆಲೆ
2025ರ ಐಪಿಎಲ್ ಮೆಗಾ ಹರಾಜಿನಲ್ಲಿ, ಕೆಕೆಆರ್ ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ 23.75 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಆ ಮೂಲಕ, ಮಿಚೆಲ್ ಸ್ಟಾರ್ಕ್ (24.75 ಕೋಟಿ) ನಂತರ ಕೆಕೆಆರ್ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. 2024ರ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಯ್ಯರ್, 2025ರ ಆವೃತ್ತಿಯಲ್ಲಿ 11 ಪಂದ್ಯಗಳಿಂದ ಕೇವಲ 142 ರನ್ ಗಳಿಸಿ ತೀವ್ರ ನಿರಾಸೆ ಮೂಡಿಸಿದ್ದರು. ಈ ಕಳಪೆ ಪ್ರದರ್ಶನವೇ ಅವರನ್ನು ತಂಡದಿಂದ ಕೈಬಿಡಲು ಪ್ರಮುಖ ಕಾರಣ ಎನ್ನಲಾಗಿದೆ. ಅವರನ್ನು ಬಿಡುಗಡೆ ಮಾಡಿದರೆ, ಕೆಕೆಆರ್ ಖಾತೆಯಲ್ಲಿ 23.75 ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ಹರಾಜಿನಲ್ಲಿ ಇತರ ಆಟಗಾರರನ್ನು ಖರೀದಿಸಲು ಹೆಚ್ಚಿನ ಅವಕಾಶ ಸಿಗಲಿದೆ.
ಹರಾಜಿನಲ್ಲಿ ಮರುಖರೀದಿಸುವ ತಂತ್ರ?
ಮಾಜಿ ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಅವರ ಪ್ರಕಾರ, ಕೆಕೆಆರ್ ತಂಡವು ವೆಂಕಟೇಶ್ ಅಯ್ಯರ್ ಅವರನ್ನು ಹರಾಜಿಗೆ ಬಿಡುಗಡೆ ಮಾಡಿ, ನಂತರ ಕಡಿಮೆ ಬೆಲೆಗೆ ಮರಳಿ ಖರೀದಿಸುವ ತಂತ್ರವನ್ನು ಅನುಸರಿಸಬಹುದು. “ವೆಂಕಟೇಶ್ ಅಯ್ಯರ್ ಅವರಂತಹ ಆಟಗಾರನಿಗೆ 23.75 ಕೋಟಿ ನೀಡುವುದು ತುಂಬಾ ಹೆಚ್ಚು. ಅವರನ್ನು ಬಿಡುಗಡೆ ಮಾಡಿ, ಹರಾಜಿನಲ್ಲಿ ಕಡಿಮೆ ಬೆಲೆಗೆ ಮರಳಿ ಖರೀದಿಸುವುದು ಉತ್ತಮ ತಂತ್ರ,” ಎಂದು ಅವರು ಸಲಹೆ ನೀಡಿದ್ದಾರೆ.
2025ರ ಹರಾಜಿನಲ್ಲಿ ನಡೆದಿದ್ದ ಬಿಡ್ ವಾರ್
2025ರ ಮೆಗಾ ಹರಾಜಿನಲ್ಲಿ, ವೆಂಕಟೇಶ್ ಅಯ್ಯರ್ ಅವರಿಗಾಗಿ ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವೆ ತೀವ್ರ ಪೈಪೋಟಿ ನಡೆದಿತ್ತು. ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಸ್ಪರ್ಧೆಗೆ ಇಳಿದಿತ್ತು. ಅಂತಿಮವಾಗಿ, 23.75 ಕೋಟಿ ರೂಪಾಯಿಗಳಿಗೆ ಕೆಕೆಆರ್ ಅವರನ್ನು ಮರಳಿ ಖರೀದಿಸುವಲ್ಲಿ ಯಶಸ್ವಿಯಾಗಿತ್ತು.
ನಾಯಕನಾಗಿ ರಹಾನೆ ಮುಂದುವರಿಕೆ?
ಕಳೆದ ಋತುವಿನಲ್ಲಿ ಅಜಿಂಕ್ಯ ರಹಾನೆ ಅವರ ನಾಯಕತ್ವದಲ್ಲಿ ಕೆಕೆಆರ್ ತಂಡವು 14 ಪಂದ್ಯಗಳಲ್ಲಿ ಕೇವಲ 5 ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿತ್ತು. ಆದಾಗ್ಯೂ, ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಆದರೆ, ಅವರು ನಾಯಕರಾಗಿ ಮುಂದುವರೆಯುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ
ಇದನ್ನೂ ಓದಿ: IPL 2026 : ಕೆಕೆಆರ್ಗೆ ಹೊಸ ಬಲ, ಬೌಲಿಂಗ್ ಕೋಚ್ ಆಗಿ ಟಿಮ್ ಸೌಥಿ


















