ನವದೆಹಲಿ : ಐಪಿಎಲ್ 2026ರ (IPL 2026) ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಅಮೂಲ್ಯ ಸಮಯ ಕಳೆದಿದ್ದಾರೆ. ತಮ್ಮ ಬಾಲ್ಯದ ಕೋಚ್ ಅವರ ಕ್ರಿಕೆಟ್ ಅಕಾಡೆಮಿಯ (ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿ) ನೂತನ ಶಾಖೆಯನ್ನು ನವದೆಹಲಿಯಲ್ಲಿ ಉದ್ಘಾಟಿಸಿದ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕೊಹ್ಲಿ, ಯುವ ಸಮೂಹಕ್ಕೆ ಜೀವನದ ಅತ್ಯಮೂಲ್ಯವಾದ ಸಂದೇಶವನ್ನು ನೀಡಿದ್ದಾರೆ.

ಕ್ರಿಕೆಟ್ ಕಡೆಗೆ ಹೆಚ್ಚು ಗಮನಹರಿಸುವ ಸಲುವಾಗಿ ತಾವು ಬಹಳ ಹಿಂದೆಯೇ ಶಾಲಾ ವಾತಾವರಣದಿಂದ ದೂರ ಉಳಿದಿರುವುದರಿಂದ, ಶಾಲೆಯಲ್ಲಿ ಭಾಷಣ ಮಾಡುವುದು ತಮಗೆ ಮುಜುಗರದ ಸಂಗತಿ ಎಂದು ಕೊಹ್ಲಿ ತಮ್ಮ ಭಾಷಣದ ಆರಂಭದಲ್ಲಿಯೇ ಮುಕ್ತವಾಗಿ ಹಂಚಿಕೊಂಡರು.
ಶಾಲೆಯೆಂದರೆ ಕಲಿಯುವ, ಬೆಳೆಯುವ ಮತ್ತು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವ ಪವಿತ್ರ ಸ್ಥಳವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯ ವಾತಾವರಣಕ್ಕೆ ಹಾಗೂ ತಮ್ಮ ಜೀವನದ ಬಹುಪಾಲು ಸಮಯವನ್ನು ಪಾಠ ಮಾಡಲು ಮುಡಿಪಾಗಿಡುವ ಶಿಕ್ಷಕರಿಗೆ ಮೊದಲ ಆದ್ಯತೆ ಮತ್ತು ಗೌರವ ನೀಡಬೇಕು. ಶಿಕ್ಷಕರಿಗೆ ಅಗತ್ಯವಿರುವ ಗೌರವ ಮತ್ತು ಗಮನವನ್ನು ನೀಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಎಂದು ಕಿವಿಮಾತು ಹೇಳಿದರು.
ನಿಮ್ಮ ಕನಸುಗಳ ಬಗ್ಗೆ ನೂರಕ್ಕೆ ನೂರು ಪ್ರಾಮಾಣಿಕರಾಗಿರಿ
ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಭಾರತದ ಮಾಜಿ ನಾಯಕ, ತಾವು ಬಹಳ ಚಿಕ್ಕ ವಯಸ್ಸಿನಲ್ಲೇ ಕ್ರೀಡೆಯನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದರು. ಕ್ರಿಕೆಟ್ನಲ್ಲಿಯೇ ಮುಂದುವರಿಯುವ ಬಗ್ಗೆ ಸ್ಪಷ್ಟತೆ ಹೊಂದಿದ್ದ ತಾವು, ಈ ವಿಚಾರದಲ್ಲಿ ತಮ್ಮಷ್ಟಕ್ಕೆ ತಾವು ಹಾಗೂ ಕುಟುಂಬದವರು ಮತ್ತು ಶಿಕ್ಷಕರೊಂದಿಗೆ ಅತ್ಯಂತ ಪ್ರಾಮಾಣಿಕವಾಗಿ ನಡೆದುಕೊಂಡಿದ್ದಾಗಿ ವಿವರಿಸಿದರು. ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಕನಸುಗಳ ಬಗ್ಗೆ ಪ್ರಾಮಾಣಿಕವಾಗಿರಬೇಕು ಮತ್ತು ಸಂಪೂರ್ಣ ಬದ್ಧತೆಯಿಂದ ಆ ಕನಸುಗಳನ್ನು ಬೆನ್ನಟ್ಟಬೇಕು. ನೀವು ನಿಮ್ಮ ಗುರಿಯತ್ತ ನೂರಕ್ಕೆ ನೂರು ಪ್ರಾಮಾಣಿಕರಾಗಿದ್ದೀರಾ ಅಥವಾ ಇಲ್ಲವಾ ಎಂಬ ಸತ್ಯ ಕೇವಲ ನಿಮಗೆ ಮಾತ್ರ ತಿಳಿದಿರುತ್ತದೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಎಂಟು ವರ್ಷದ ವಯಸ್ಸಿನಲ್ಲೇ ಶುರುವಾಗಿದ್ದ ಕ್ರಿಕೆಟ್ ಪಯಣ
ತಾವು ಕೇವಲ ಎಂಟು ವರ್ಷದವರಿದ್ದಾಗಲೇ ಇದೇ ಅಕಾಡೆಮಿಯಲ್ಲಿ ಕ್ರಿಕೆಟ್ ಅಭ್ಯಾಸವನ್ನು ಆರಂಭಿಸಿದ್ದಾಗಿ ನೆನಪಿಸಿಕೊಂಡ ಕೊಹ್ಲಿ, ಇಂದಿಗೂ ಬಿಡುವು ಸಿಕ್ಕಾಗಲೆಲ್ಲಾ ಅಕಾಡೆಮಿಗೆ ಭೇಟಿ ನೀಡುವುದಾಗಿ ತಿಳಿಸಿದರು. ಈ ಅಕಾಡೆಮಿ ತಮ್ಮ ಬಾಲ್ಯದ ಪ್ರಮುಖ ಭಾಗವಾಗಿದ್ದು, ಇಲ್ಲಿ ಕಲಿಯಲು ಬರುವ ಮಕ್ಕಳು ಕ್ರೀಡೆಯ ಮೌಲ್ಯವನ್ನು ಅರಿತುಕೊಂಡು ಅದ್ಭುತ ಸಾಧನೆ ಮಾಡಲಿ ಎಂದು ಹಾರೈಸಿದರು. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ರೋಚಕ ಗೆಲುವಿನ ನಂತರ ಕೊಹ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 30ರಂದು ಅಹಮದಾಬಾದ್ನಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಆಡಲಿದೆ.
ಇದನ್ನೂ ಓದಿ : RCBಯಲ್ಲಿ ಭುವನೇಶ್ವರ್ ಮಿಂಚಿನಾಟ ; ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದೇ ವರದಾನವಾಯ್ತಾ?


















