ಬೆಂಗಳೂರು : ಕಚೇರಿಯ ಲೈಟ್ ಆಫ್ ಮಾಡುವ ವಿಚಾರಕ್ಕೆ ಕೆಲಸಗಾರರ ನಡುವೆ ಆರಂಭವಾದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಭೀಮೇಶ್ ಬಾಬು (41) ಹತ್ಯೆಯಾದ ವ್ಯಕ್ತಿ. ಸೋಮಲ ವಂಶಿ (24) ಬಂಧಿತ ಆರೋಪಿ.
ಸಹದ್ಯೋಗಿ ಸೋಮಲ ವಂಶಿ ಎಂಬಾತ ಡಂಬೆಲ್ನಿಂದ ಹಣೆಗೆ ಹೊಡೆದ ಪರಿಣಾಮ ಭೀಮೇಶ್ ಬಾಬು ಮೃತಪಟ್ಟಿದ್ದಾನೆ. ಬಳಿಕ ಆರೋಪಿಯು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಿನಿಮಾ ಚಿತ್ರೀಕರಣದ ವಿಡಿಯೋಗಳನ್ನು ದಿನದ ಆಧಾರದಲ್ಲಿ ಸಂಗ್ರಹಿಸಿಡುವ ಕಂಪನಿಯಲ್ಲಿ ವಿಜಯವಾಡ ಮೂಲದ ಸೋಮಲ ವಂಶಿ ಹಾಗೂ ಚಿತ್ರದುರ್ಗ ಮೂಲದ ಭೀಮೇಶ್ ಬಾಬು ಕೆಲಸ ಮಾಡಿಕೊಂಡಿದ್ದರು. ಕಚೇರಿಯಲ್ಲಿ ರಾತ್ರಿ ತಂಗುತ್ತಿದ್ದ ಇಬ್ಬರ ನಡುವೆ ತಡರಾತ್ರಿ 1:30ರ ಸುಮಾರಿಗೆ ಲೈಟ್ ಆಫ್ ಮಾಡುವ ವಿಚಾರದಲ್ಲಿ ಪರಸ್ಪರ ಜಗಳ ಆರಂಭವಾಗಿದೆ.
ಈ ಸಮಯದಲ್ಲಿ ಕೋಪಗೊಂಡ ಸೋಮಲ ವಂಶಿ ಡಂಬೆಲ್ನಿಂದ ಭೀಮೇಶ್ ಬಾಬುವಿನ ಹಣೆಯ ಮೇಲೆ ಹೊಡೆದಿದ್ದ. ಪರಿಣಾಮ ರಕ್ತಸ್ರಾವವಾಗಿ ಭೀಮೇಶ್ ಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯದ ಬಳಿಕ ಆರೋಪಿ ಸೋಮಲ ವಂಶಿ ಸ್ವತಃ ತಾತೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಕನ್ನಡ ರಾಜ್ಯೋತ್ಸವ ಸಂಭ್ರಮ | ನಾಗೂರಿನಲ್ಲಿ ಅದ್ದೂರಿಯಾಗಿ ಜರುಗಿದ ‘ಕನ್ನಡ ಹಬ್ಬ’



















