ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಈ ತಾರಾ ದಂಪತಿಗೆ ವಿದೇಶ ಪ್ರವಾಸಕ್ಕೆ ತೆರಳಲು ಬಾಂಬೆ ಹೈಕೋರ್ಟ್ ಅನುಮತಿ ನಿರಾಕರಿಸಿದೆ. ದಂಪತಿ ವಿರುದ್ಧ ಗಂಭೀರ ಪ್ರಕರಣಗಳು ಬಾಕಿ ಇರುವುದನ್ನು ಉಲ್ಲೇಖಿಸಿ, ಥೈಲ್ಯಾಂಡ್ನ ಫುಕೆಟ್ಗೆ ಮೂರು ದಿನಗಳ ಕುಟುಂಬ ಪ್ರವಾಸಕ್ಕೆ ಅನುಮತಿ ನೀಡಲು ನ್ಯಾಯಾಲಯ ನಿರಾಕರಿಸಿದೆ.
ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಹೊರಡಿಸಿರುವ ಲುಕ್ ಔಟ್ ಸರ್ಕ್ಯುಲರ್ (LOC) ಅನ್ನು ತಡೆಹಿಡಿಯಲೂ ಹೈಕೋರ್ಟ್ ನಿರಾಕರಿಸಿದೆ. ಈ ಲುಕ್ಔಟ್ ನೋಟಿಸ್ನಿಂದಾಗಿ ದಂಪತಿ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ.
ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಖದ್ ಅವರ ಪೀಠದ ಮುಂದೆ, ದಂಪತಿಯ ವಕೀಲರು, “ರಾಜ್ ಕುಂದ್ರಾ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸಿದ್ದಾರೆ, ಹೀಗಾಗಿ ಅವರಿಗೆ ವಿದೇಶ ಪ್ರವಾಸಕ್ಕೆ ಅನುವು ಮಾಡಿಕೊಡಬೇಕು” ಎಂದು ವಾದಿಸಿದರು. ಆದರೆ, ಸರ್ಕಾರದ ವಕೀಲರು ಅವರಿಗೆ ಯಾವುದೇ ಪರಿಹಾರ ನೀಡಬಾರದು ಎಂದು ಪ್ರತಿವಾದಿಸಿದರು. ಪ್ರಕರಣದ ಮುಂದಿನ ವಿಚಾರಣೆ ಎರಡು ವಾರಗಳ ನಂತರ ನಡೆಯಲಿದೆ.
“ಪ್ರಕರಣದ ಹಿನ್ನೆಲೆ”
ಉದ್ಯಮಿ ದೀಪಕ್ ಕೊಠಾರಿ ಅವರು, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ತಮ್ಮ ಸದ್ಯ ಸ್ಥಗಿತಗೊಂಡಿರುವ ಕಂಪನಿಯಲ್ಲಿ 60 ಕೋಟಿ ರೂಪಾಯಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಆದರೆ, ಈ ಮೊತ್ತವನ್ನು ದಂಪತಿ ತಮ್ಮ ವೈಯಕ್ತಿಕ ಖರ್ಚುಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಈಗಾಗಲೇ ಆರ್ಥಿಕ ಅಪರಾಧಗಳ ವಿಭಾಗದ ಮುಂದೆ ವಿಚಾರಣೆಗೂ ಹಾಜರಾಗಿದ್ದಾರೆ.
“ದಂಪತಿಯ ವಾದ”
ವಿದೇಶ ಪ್ರಯಾಣದ ನಿರ್ಬಂಧಗಳನ್ನು ಸಡಿಲಿಸುವಂತೆ ದಂಪತಿ ನ್ಯಾಯಾಲಯವನ್ನು ಕೋರಿದ್ದರು. ರಾಜ್ ಕುಂದ್ರಾ ಒಬ್ಬ ಉದ್ಯಮಿಯಾಗಿದ್ದು, ವ್ಯಾಪಾರದ ನಿಮಿತ್ತ ಆಗಾಗ್ಗೆ ವಿದೇಶಕ್ಕೆ ಪ್ರಯಾಣಿಸಬೇಕಾಗುತ್ತದೆ. ಅಂತೆಯೇ, ನಟಿಯಾಗಿರುವ ಶಿಲ್ಪಾ ಶೆಟ್ಟಿ ಕೂಡ ವೃತ್ತಿಪರ ಕಾರ್ಯಗಳಿಗಾಗಿ ವಿದೇಶಕ್ಕೆ ಹೋಗಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. “ತಮ್ಮ ವ್ಯಾಪಾರ ಮತ್ತು ವೃತ್ತಿಯನ್ನು ಮುಂದುವರಿಸುವುದು ಅರ್ಜಿದಾರರ ಮೂಲಭೂತ ಹಕ್ಕಾಗಿದ್ದು, ವಿದೇಶ ಪ್ರಯಾಣದ ಅವಕಾಶಗಳನ್ನು ನಿರಾಕರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ” ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಆದರೆ, ನ್ಯಾಯಾಲಯವು ಈ ವಾದವನ್ನು ಪರಿಗಣಿಸಿ ವಿದೇಶ ಪ್ರವಾಸಕ್ಕೆ ಅವಕಾಶ ಕಲ್ಪಿಸಲು ನಿರಾಕರಿಸಿದೆ.



















