ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ಗೆ ಸಾವಿರಾರು ಕೋಟಿ ರೂ. ವಂಚಿಸಿ, ವಿದೇಶಕ್ಕೆ ಪರಾರಿಯಾಗಿ ಅಲ್ಲೇ ನೆಲೆಸಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಹಸ್ತಾಂತರಿಸುವಂತೆ ಬೆಲ್ಜಿಯಂಗೆ ಭಾರತ ಮನವಿ ಮಾಡಿದೆ. ಜೊತೆಗೆ ಮುಂಬೈ ಜೈಲಿನಲ್ಲಿ ಚೋಕ್ಸಿಗೆ ನೀಡಲಾಗುವ ಸೌಲಭ್ಯಗಳ ಬಗ್ಗೆ ವಿವರವಾದ ಭರವಸೆಯನ್ನೂ ನೀಡಿದೆ. ಚೋಕ್ಸಿಗೆ ಏಕಾಂತವಾಸ ಶಿಕ್ಷೆ ಇರುವುದಿಲ್ಲ ಮತ್ತು ಅವರಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
ಚೋಕ್ಸಿಯನ್ನು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗುವುದು ಮಾತ್ರವಲ್ಲದೇ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಭಾರತ ಸರ್ಕಾರವು ಬೆಲ್ಜಿಯಂ ಅಧಿಕಾರಿಗಳಿಗೆ ಭರವಸೆ ನೀಡಿದೆ. ಭಾರತ ನೀಡಿರುವ ಭರವಸೆಗಳ ಪಟ್ಟಿ ಇಂತಿವೆ:
ಹಾಸಿಗೆ, ದಿಂಬು, ಹೊದಿಕೆ, ಮರದ ಮಂಚ
ಚೋಕ್ಸಿಯನ್ನು ಮುಂಬೈನ ಆರ್ಥರ್ ರೋಡ್ ಜೈಲಿನ ಬ್ಯಾರಕ್ ಸಂಖ್ಯೆ 12 ರಲ್ಲಿ ಇರಿಸಲಾಗುವುದು. ಅವರಿಗೆ ಮಲಗಲು ಹತ್ತಿಯ ಹಾಸಿಗೆ, ದಿಂಬು ಮತ್ತು ಹೊದಿಕೆ ನೀಡಲಾಗುವುದು. ವೈದ್ಯಕೀಯ ಕಾರಣಗಳಿಗಾಗಿ ಮರದ ಅಥವಾ ಲೋಹದ ಮಂಚವನ್ನು ಒದಗಿಸಲೂ ಅವಕಾಶವಿದೆ. ಕೋಣೆಯಲ್ಲಿ ಸಾಕಷ್ಟು ಗಾಳಿ-ಬೆಳಕು ಮತ್ತು ವೈಯಕ್ತಿಕ ವಸ್ತುಗಳನ್ನು ಸಂಗ್ರಹಿಸಿಡಲು ಸ್ಥಳಾವಕಾಶವಿರುತ್ತದೆ.
ಮುಂಬೈನ ವಾತಾವರಣ ಸಾಮಾನ್ಯವಾಗಿ ಸೌಮ್ಯವಾಗಿರುವುದರಿಂದ ಕೋಣೆಯಲ್ಲಿ ಹೀಟರ್ ಅಥವಾ ಹವಾನಿಯಂತ್ರಣ(ಎಸಿ) ವ್ಯವಸ್ಥೆಯ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಆಹಾರ ಮತ್ತು ಮನರಂಜನೆ
ದಿನಕ್ಕೆ ಮೂರೂ ಹೊತ್ತು ಪೌಷ್ಟಿಕ ಆಹಾರವನ್ನು ನೀಡಲಾಗುವುದು. ವೈದ್ಯರ ಅನುಮೋದನೆಯ ಮೇರೆಗೆ ವಿಶೇಷ ಆಹಾರ ಪದ್ಧತಿಗೂ ಅವಕಾಶವಿದೆ. ಜೈಲಿನ ಕ್ಯಾಂಟೀನ್ನಿಂದ ಹಣ್ಣುಗಳು ಮತ್ತು ಇತರೆ ತಿಂಡಿಗಳನ್ನು ಖರೀದಿಸಬಹುದು.
ವ್ಯಾಯಾಮ-ಮನರಂಜನೆ
ಪ್ರತಿದಿನ ಒಂದು ಗಂಟೆಗೂ ಹೆಚ್ಚು ಕಾಲ ಹೊರಾಂಗಣದಲ್ಲಿ ವ್ಯಾಯಾಮ ಮತ್ತು ಮನರಂಜನೆಗೆ ಅವಕಾಶ ನೀಡಲಾಗುವುದು. ಒಳಾಂಗಣದಲ್ಲಿ ಬೋರ್ಡ್ ಗೇಮ್ಸ್ ಮತ್ತು ಬ್ಯಾಡ್ಮಿಂಟನ್ ಆಡಲು ಅವಕಾಶವಿದೆ. ಅಲ್ಲದೆ, ಯೋಗ, ಧ್ಯಾನ ಮತ್ತು ಗ್ರಂಥಾಲಯದ ಸೌಲಭ್ಯವೂ ಲಭ್ಯವಿರುತ್ತದೆ.
ವೈದ್ಯಕೀಯ ಆರೈಕೆ
ಜೈಲಿನಲ್ಲಿ 24×7 ವೈದ್ಯಕೀಯ ಸೌಲಭ್ಯ ಲಭ್ಯವಿರುತ್ತದೆ. ಆರ್ಥರ್ ರೋಡ್ ಜೈಲಿನಲ್ಲೇ 20 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಇದೆ. ಈ ಆಸ್ಪತ್ರೆಯಲ್ಲಿ ಆರು ವೈದ್ಯಾಧಿಕಾರಿಗಳು, ನರ್ಸಿಂಗ್ ಸಿಬ್ಬಂದಿ, ಫಾರ್ಮಾಸಿಸ್ಟ್ಗಳು ಮತ್ತು ಇಸಿಜಿ ಸೇರಿದಂತೆ ಅಗತ್ಯ ಉಪಕರಣಗಳಿವೆ. ಜೈಲಿನಿಂದ 3 ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಪೂರ್ಣ ಪ್ರಮಾಣದ ಸರ್ಕಾರಿ ಆಸ್ಪತ್ರೆ ಇದೆ. ಅಗತ್ಯವಿದ್ದರೆ ತಜ್ಞ ವೈದ್ಯರ ಸಮಾಲೋಚನೆಗಾಗಿ ಚೋಕ್ಸಿಯನ್ನು ಅಲ್ಲಿಗೆ ಕರೆದೊಯ್ಯಲಾಗುವುದು. ಜೈಲಿನ ಆಸ್ಪತ್ರೆಯಲ್ಲಿ ಮನೋವೈದ್ಯಕೀಯ, ಕ್ಷಯರೋಗ ಮತ್ತು ದಂತ ಚಿಕಿತ್ಸಾ ವಿಭಾಗಗಳೂ ಇವೆ. ತುರ್ತು ಪರಿಸ್ಥಿತಿಗಾಗಿ ಆಂಬುಲೆನ್ಸ್ ವ್ಯವಸ್ಥೆಯೂ ಇದೆ.
ಈ ಭರವಸೆಗಳನ್ನು ಬೆಲ್ಜಿಯಂ ನ್ಯಾಯಾಲಯಗಳು ಪರಿಶೀಲಿಸಲಿವೆ. ಭಾರತದಲ್ಲಿ ಚೋಕ್ಸಿಯ ಬಂಧನದ ಪರಿಸ್ಥಿತಿಗಳು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ಪೂರೈಸುತ್ತವೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದರೆ, ಆತನನ್ನು ವಿಚಾರಣೆಗಾಗಿ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ.


















