ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಅಂಬೇಡ್ಕರ್ ನಗರ ಜಿಲ್ಲೆಯ ಅಕ್ಬರ್ಪುರ ಬಸ್ ಸ್ಟ್ಯಾಂಡ್ನ ಹೆಸರನ್ನು ‘ಶ್ರವಣ ಧಾಮ ಬಸ್ ಸ್ಟ್ಯಾಂಡ್’ ಎಂದು ಬದಲಾಯಿಸುವುದಾಗಿ ಘೋಷಿಸಿದ್ದಾರೆ. ಈ ನಾಮಕರಣವು ರಾಮಾಯಣದ ಶ್ರವಣ ಕುಮಾರನ ಸಾಂಸ್ಕೃತಿಕ ಮತ್ತು ಪೌರಾಣಿಕ ಪರಂಪರೆಗೆ ಗೌರವ ಸಲ್ಲಿಸುವ ಪ್ರಯತ್ನವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಂಬೇಡ್ಕರ್ ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ 1,184 ಕೋಟಿ ರೂಪಾಯಿ ಮೌಲ್ಯದ 194 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭದ ವೇಳೆ ಅವರು ಈ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ 102 ಯೋಜನೆಗಳ ಉದ್ಘಾಟನೆ ಮತ್ತು 92 ಯೋಜನೆಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.
ಇದೇ ವೇಳೆ, ತಾಂಡಾ ಬಸ್ ಸ್ಟ್ಯಾಂಡ್ನ ಹೆಸರನ್ನು ದಿವಂಗತ ಜೈರಾಮ್ ವರ್ಮಾ ಅವರ ಸ್ಮರಣಾರ್ಥ ‘ಜೈರಾಮ್ ವರ್ಮಾ ಬಸ್ ಸ್ಟ್ಯಾಂಡ್’ ಎಂದು ನಾಮಕರಣ ಮಾಡಲಾಗುವುದು ಎಂದು ಸಿಎಂ ಯೋಗಿ ತಿಳಿಸಿದ್ದಾರೆ. ಇದೇ ವೇಳೆ ಶ್ರವಣ ಧಾಮವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಸರ್ಕಾರದ ಬದ್ಧತೆಯನ್ನು ಅವರು ಒತ್ತಿಹೇಳಿದ್ದಾರೆ. ಶಿವ ಬಾಬಾ ಧಾಮದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಸಹ ರಾಜ್ಯ ಸರ್ಕಾರ ಹೊಂದಿದ್ದು, ಈ ದಿಕ್ಕಿನಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಶ್ರವಣ ಧಾಮದ ಪುರಾತನ ಪರಂಪರೆಯನ್ನು ಎತ್ತಿ ಹಿಡಿಯುವ ಜೊತೆಗೆ, ರಾಜ್ಯದಲ್ಲಿ ಅಪರಾಧ ಮತ್ತು ಗಲಭೆ-ಮುಕ್ತ ವಾತಾವರಣವನ್ನು ಸೃಷ್ಟಿಸುತ್ತಿದ್ದೇವೆ. ಮಹಿಳೆಯರು ಮತ್ತು ವ್ಯಾಪಾರಿಗಳ ಸುರಕ್ಷತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸುತ್ತೇವೆ. ಕಂದಾಯ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸಮಯಬದ್ಧ ಚೌಕಟ್ಟನ್ನು ರೂಪಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇದೇ ವೇಳೆ, ಈ ನಾಮಕರಣದ ಕುರಿತು ಪ್ರತಿಪಕ್ಷವಾದ ಸಮಾಜವಾದಿ ಪಕ್ಷದಿಂದ ಟೀಕೆ ವ್ಯಕ್ತವಾಗಿದ್ದು, ಸಿಎಂ ಯೋಗಿ ಅವರು ಕೇವಲ ನಾಮಕರಣದ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದೆ.