ಇಸ್ಲಾಮಾಬಾದ್: ಭಾರತ ನಡೆಸಿದ ಆಪರೇಷನ್ ಸಿಂದೂರದ ಕಾರ್ಯಾಚರಣೆಯು ಪಾಕಿಸ್ತಾನದ ಬುಡವನ್ನೇ ಅಲುಗಾಡಿಸಿದ್ದು, ಈಗ ಅಲ್ಲಿನ ಬಹವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ!
‘ಜಾಮಿಯಾ ಮಸ್ಜಿದ್ ಸುಭಾನ್ ಅಲ್ಲಾ’ ಎಂಬ ಹೆಸರಿನಲ್ಲಿ ಜೈಶ್ ಪ್ರಧಾನ ಕಚೇರಿಯ ಸಂಕೀರ್ಣವು ಕಾರ್ಯನಿರ್ವಹಿಸುತ್ತಿತ್ತು. ಇದು ಗೂಗಲ್ ಮ್ಯಾಪ್ನಲ್ಲೂ ಕಾಣಿಸುತ್ತಿತ್ತು. ಆದರೆ, ಭಾರತದ ನಿಖರ ದಾಳಿಯ ನಂತರ ಗೂಗಲ್ ಮ್ಯಾಪ್ಸ್ನಲ್ಲಿ ಈ ಹೆಸರನ್ನು ಬರೆದರೆ “ಶಾಶ್ವತವಾಗಿ ಮುಚ್ಚಲಾಗಿದೆ” ಎಂದು ತೋರಿಸುತ್ತಿದೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7, 2025 ರಂದು ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಈ ಪ್ರದೇಶದ ಮೇಲೆ ಕ್ಷಿಪಣಿಗಳ ಮಳೆ ಸುರಿಸಿ, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದವು.
ಬಹವಲ್ಪುರದ ಜೈಶ್-ಎ-ಮೊಹಮ್ಮದ್ನ ಮುಖ್ಯ ಕಚೇರಿಯು ಪಾಕಿಸ್ತಾನದ ಪಂಜಾಬ್ ಪ್ರಾಂತದ ಹೃದಯಭಾಗದಲ್ಲಿ, ಭಾರತದ ಗಡಿಯಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ. ಈ ಸಂಕೀರ್ಣವು ಮಸೀದಿಯ ರೂಪದಲ್ಲಿ ಕಾಣಿಸಿಕೊಂಡರೂ, ಇದು ಜೈಶ್ನ ತರಬೇತಿ ಮತ್ತು ಭಾವನಾತ್ಮಕ ಧಾರ್ಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ. ‘ಆಪರೇಷನ್ ಸಿಂದೂರ’ದಡಿ, ಭಾರತೀಯ ಸೇನೆಯು ಒಟ್ಟು ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಬಹವಲ್ಪುರ, ಮುರಿದ್ಕೆ ಮತ್ತು ಕೋಟ್ಲಿ ಪ್ರಮುಖ ಗುರಿಗಳಾಗಿದ್ದವು.
ಸ್ಯಾಟಲೈಟ್ ಚಿತ್ರಗಳು ಮತ್ತು ದಾಳಿಯ ನಂತರದ ದೃಶ್ಯಗಳು ಈ ಕೇಂದ್ರವು ಗಮನಾರ್ಹವಾಗಿ ಹಾನಿಗೊಳಗಾಗಿರುವುದನ್ನು ತೋರಿಸಿವೆ. ಕಟ್ಟಡದ ಬಹುತೇಕ ಭಾಗಗಳು ಶಿಥಿಲಗೊಂಡಿದ್ದು, ಛಾವಣಿಯಲ್ಲಿ ದೊಡ್ಡ ರಂಧ್ರಗಳು ಕಾಣಿಸಿಕೊಂಡಿವೆ. ಈ ದಾಳಿಯು ಜೈಶ್-ಎ-ಮೊಹಮ್ಮದ್ ಅನ್ನೇ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಾಗಿತ್ತು. ಇದರಲ್ಲಿ ಜೈಶ್ನ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ನ ಕುಟುಂಬದ 10 ಸದಸ್ಯರು ಮತ್ತು ಆತನ 4 ಆಪ್ತ ಸಹಾಯಕರು ಸಾವಿಗೀಡಾಗಿದ್ದರು.
ಜೈಶ್ ಉಗ್ರ ಸಂಘಟನೆಯು 2001ರ ಭಾರತೀಯ ಸಂಸತ್ ಮೇಲಿನ ದಾಳಿ, 2016ರ ಪಠಾಣ್ಕೋಟ್ ವಾಯುನೆಲೆ ದಾಳಿ ಮತ್ತು 2019ರ ಪುಲ್ವಾಮಾ ದಾಳಿಗಳಂತಹ ಹಲವಾರು ಭಯೋತ್ಪಾದಕ ದಾಳಿಗಳಿಗೆ ಕಾರಣವಾಗಿದೆ. ಬಹವಲ್ಪುರದ ‘ಜಮಿಯಾ ಮಸ್ಜಿದ್ ಸುಭಾನ್ ಅಲ್ಲಾ’ ಕಾಂಪ್ಲೆಕ್ಸ್, ಜೈಶ್ನ ಪ್ರಾಥಮಿಕ ಕಾರ್ಯಾಚರಣಾ ಕೇಂದ್ರವಾಗಿತ್ತು. ಇದು 2022 ರಿಂದ 18 ಎಕರೆಗೆ ವಿಸ್ತರಿಸಿತ್ತು ಹೊಸ ಮಸೀದಿಗಳು, ವಿದ್ಯಾರ್ಥಿನಿಲಯಗಳು ಮತ್ತು ಭದ್ರತಾ ಪೋಸ್ಟ್ಗಳನ್ನು ಒಳಗೊಂಡಿತ್ತು.