ಶ್ರೀನಗರ: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೇನಾಬ್ ಬ್ರಿಡ್ಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು. ಉಧಾಂಪುರ- ಶ್ರೀನಗರ-ಬಾರಾಮುಲ್ಲಾ ರೈಲ್ ಲಿಂಕ್ ಯೋಜನೆಯ ಭಾಗವಾಗಿರುವ ಈ ಉಕ್ಕಿನ ರೈಲ್ವೆ ಸೇತುವೆಯು ಈಗ ಕಾಶ್ಮೀರ ಕಣಿವೆಯನ್ನು ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
ಇದಲ್ಲದೇ ಪ್ರಧಾನಿ ಮೋದಿಯವರು ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ಮತ್ತು ಶ್ರೀನಗರದ ನಡುವೆ ಎರಡು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೂ ಹಸಿನು ನಿಶಾನೆ ತೋರಿದರು.
ಅಂಜಿ ನದಿಯ ಮೇಲೆ ನಿರ್ಮಿಸಲಾಗಿರುವ ಭಾರತದ ಮೊಟ್ಟಮೊದಲ ಕೇಬಲ್ ಆಧರಿತ ರೈಲ್ವೆ ಸೇತುವೆ ಅಂಜಿ ಖಾಡ್ ಸೇತುವೆಯನ್ನೂ ಮೋದಿ ಉದ್ಘಾಟಿಸಿದರು. ನದಿಯಿಂದ 331 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಇದು 725 ಮೀಟರ್ ಉದ್ದವಿದೆ. ವಿಶೇಷವೆಂದರೆ ಈ ಸೇತುವೆಯನ್ನು ಕೇವಲ 11 ತಿಂಗಳಲ್ಲಿ ನಿರ್ಮಿಸಲಾಗಿದೆ.

ಇಂದು ಬೆಳಗ್ಗೆ ಉಧಾಂಪುರದಲ್ಲಿರುವ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ಹೆಲಿಕಾಪ್ಟರ್ ಮೂಲಕ ಚೇನಾಬ್ ಸೇತುವೆಯಿರುವ ಪ್ರದೇಶಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಸೇತುವೆ ಉದ್ಘಾಟನೆ ನೆರವೇರಿಸಿದರು. 1315 ಮೀಟರ್ ಉದ್ದದ ಚೇನಾಬ್ ಸೇತುವೆಯು ನದಿಯಿಂದ 359 ಮೀಟರ್ ಎತ್ತರದಲ್ಲಿದೆ. ಇದನ್ನು ಭಾರತದ ಇಂಜಿನಿಯರಿಂಗ್ ಅದ್ಭುತ ಎಂದೇ ಬಣ್ಣಿಸಲಾಗಿದೆ. ವಿಶೇಷವೆಂದರೆ ಈ ಸೇತುವೆಯು ಪ್ಯಾರಿಸ್ನ ಐಫೆಲ್ ಟವರ್ ಗಿಂತಲೂ ಹೆಚ್ಚಿನ ಎತ್ತರ ಹೊಂದಿದೆ.
ಏಪ್ರಿಲ್ ನಲ್ಲಿ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ ಇದು ಪ್ರಧಾನಿ ಮೋದಿಯವರ ಮೊದಲ ಕಾಶ್ಮೀರ ಭೇಟಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ಮೋದಿಯವರು ಇಂದು ಸುಮಾರು 46 ಸಾವಿರ ರೂಪಾಯಿಗೂ ಹೆಚ್ಚಿನ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.