ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷವು ತಾರಕಕ್ಕೇರಿದೆ. ಜಮ್ಮು ಮೇಲೆ ಪಾಕಿಸ್ತಾನ ನಡೆಸಿದ ಡ್ರೋನ್ ಗಳನ್ನು ಭಾರತ ಹೊಡೆದುರುಳಿಸಿದೆ. ಹಾಗೆಯೇ, ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಲಾಹೋರ್, ಸಿಯಾಲ್ ಕೋಟ್ ಸೇರಿ ಹಲವೆಡೆ ಭಾರತ ದಾಳಿ ನಡೆಸುತ್ತಿದೆ. ಇದರ ಬೆನ್ನಲ್ಲೇ, ಕಾರ್ಯಾಚರಣೆಗೆ ‘ಆಪರೇಷನ್ ಸಿಂದೂರ’ ಎಂದು ಹೆಸರಿಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬುದ್ಧಿಜೀವಿಗಳು, ಪರಿಣತರೊಂದಿಗೆ ಆಪರೇಷನ್ ಸಿಂದೂರ ಎಂಬ ಹೆಸರಿನ ಕುರಿತು ಚರ್ಚಿಸಲಾಯಿತು. ಚರ್ಚೆಯ ಬಳಿಕ, ಸಿಂದೂರ ಎಂಬ ಪದವು ಒಂದೇ ಧರ್ಮಕ್ಕೆ ಸೀಮಿತವಾಗಿದೆ. ಇದು ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದ ಪದವಾಗಿದೆ. ಹಾಗಾಗಿ, ಸಿಂದೂರ ಎಂಬ ಪದದ ಬದಲು, ಬೇರೆ ಹೆಸರು ಇಡಬಹುದಿತ್ತು” ಎಂದು ವಾಹಿನಿಯೊಂದರ ಜತೆ ಮಾತನಾಡುವಾಗ ಉದಿತ್ ರಾಜ್ ಹೇಳಿದ್ದಾರೆ.
ಉದಿತ್ ರಾಜ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ. “ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ವೇಳೆಯೂ ಕಾಂಗ್ರೆಸ್ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ” ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ಉದಿತ್ ರಾಜ್ ಹೇಳಿಕೆಯನ್ನು ಖಂಡಿಸಿದ್ದಾರೆ.
“ಭಾರತದ ಮೇಲೆ ದಾಳಿ ಮಾಡಿದವರ ಧರ್ಮವನ್ನು ಕಾಂಗ್ರೆಸ್ ನೋಡುವುದಿಲ್ಲ. ಆದರೆ, ದಾಳಿ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಿದ ಭಾರತದ ಕಾರ್ಯಾಚರಣೆ ವಿಷಯದಲ್ಲಿ ಕಾಂಗ್ರೆಸ್ ಧರ್ಮವನ್ನು ನೋಡುತ್ತಿದೆ. ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಏರ್ ಸ್ಟ್ರೈಕ್ ವಿಚಾರದಲ್ಲೂ ರಾಜಕೀಯ ಮಾಡಿದ್ದ ಕಾಂಗ್ರೆಸ್ ಈಗ ಆಪರೇಷನ್ ಸಿಂದೂರದ ಬಗ್ಗೆಯೂ ತಗಾದೆ ತೆಗೆದಿದೆ” ಎಂದು ತಿರುಗೇಟು ನೀಡಿದ್ದಾರೆ.