ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ಕಂಟೆಂಟ್ಗಳನ್ನು ಪ್ರಕಟಿಸಿದ್ದಕ್ಕಾಗಿ ಒಟ್ಟು 63 ದಶಲಕ್ಷ ಚಂದಾದಾರರನ್ನು ಹೊಂದಿರುವ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಸುದ್ದಿ ಸಂಸ್ಥೆಗಳಾದ ಡಾನ್, ಸಮಾ ಟಿವಿ, ಎಆರ್ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ ಗಳ ಯೂಟ್ಯೂಬ್ ಚಾನೆಲ್ಗಳು ನಿಷೇಧಕ್ಕೊಳಗಾಗಿವೆ. ಇದೇ ವೇಳೆ ಪತ್ರಕರ್ತರಾದ ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ ಎಂಬವರ ಯೂಟ್ಯೂಬ್ ಚಾನೆಲ್ಗಳಿಗೂ ನಿರ್ಬಂಧ ಹೇರಲಾಗಿದೆ. ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್ ಮತ್ತು ರಝಿ ನಾಮಾ ಸೇರಿದಂತೆ ಇತರ ಹ್ಯಾಂಡಲ್ ಗಳನ್ನೂ ನಿಷೇಧಿಸಲಾಗಿದೆ.
ಈ ಯೂಟ್ಯೂಬ್ ಚಾನೆಲ್ಗಳು ಭಾರತ, ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ವಿರುದ್ಧ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳು ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದವು ಎನ್ನುವುದು ಭಾರತ ಸರ್ಕಾರದ ಆರೋಪವಾಗಿದೆ.
ಈ ಚಾನೆಲ್ ಗಳನ್ನು ವೀಕ್ಷಿಸಲು ಪ್ರಯತ್ನಿಸಿದರೆ, ಅದರಲ್ಲಿ, “ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸರ್ಕಾರದ ಆದೇಶದಿಂದಾಗಿ ಈ ಕಂಟೆಂಟ್ ಪ್ರಸ್ತುತ ಈ ದೇಶದಲ್ಲಿ ಲಭ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಗೂಗಲ್ ಟ್ರಾನ್ಸ್ಪರೆನ್ಸಿ ರಿಪೋರ್ಟ್ (transparencyreport.google.com) ಗೆ ಭೇಟಿ ನೀಡಿ” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನವೂ ಪ್ರಮುಖ ಪಾತ್ರ ವಹಿಸಿದೆ ಎಂಬ ಶಂಕೆಯ ಮೇರೆಗೆ ಆ ದೇಶದ ವಿರುದ್ಧ ಭಾರತ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪಾಕ್ ಜತೆಗಿನ ಸಿಂಧೂ ಜಲ ಒಪ್ಪಂದ ಅಮಾನತು, ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆ ಸ್ಥಗಿತದಂಥ ನಿರ್ಧಾರವನ್ನೂ ಘೋಷಿಸಿದೆ. ಇನ್ನೊಂದೆಡೆ, ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸುವ ಹಕ್ಕು ತನಗೂ ಇದೆ ಎಂದು ಇಸ್ಲಾಮಾಬಾದ್ ಪ್ರತಿಕ್ರಿಯಿಸಿದೆ.
ಏಪ್ರಿಲ್ 22 ರ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಮತ್ತು ಅದರ ಹಿಂದಿರುವವರಿಗೆ ಅವರು ಊಹಿಸಲೂ ಸಾಧ್ಯವಿಲ್ಲದ ಶಿಕ್ಷೆಯನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞೆ ಮಾಡಿದ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವೆ.
ಬಿಬಿಸಿಗೂ ಎಚ್ಚರಿಕೆ ಸಂದೇಶ:
ಇದೇ ವೇಳೆ, “Pakistan suspends visas for Indians after deadly Kashmir attack on tourists” (ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿಯಾದ ಬೆನ್ನಲ್ಲೇ ಭಾರತೀಯರ ವೀಸಾಗಳನ್ನು ಸ್ಥಗಿತಗೊಳಿಸಿದ ಪಾಕಿಸ್ತಾನ) ಎಂದು ಶೀರ್ಷಿಕೆ ನೀಡಿರುವ ಬಿಬಿಸಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಶೀರ್ಷಿಕೆಯು “ಭಾರತವೇ ಪ್ರವಾಸಿಗರನ್ನು ಕೊಂದಿದೆ” ಎಂಬಂಥ ಅರ್ಥವನ್ನು ಕೊಡುತ್ತದೆ ಎಂದು ಹಲವು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಸಿಯ ಭಾರತದ ಮುಖ್ಯಸ್ಥ ಜಾಕಿ ಮಾರ್ಟಿನ್ ಅವರಿಗೆ ಇಂಥ ವರದಿಯ ಕುರಿತು ಎಚ್ಚರಿಕೆ ವಹಿಸುವಂತೆ ವಿದೇಶಾಂಗ ಸಚಿವಾಲಯದ ವಿದೇಶಾಂಗ ಪ್ರಚಾರ ಇಲಾಖೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಬಿಬಿಸಿಯ ವರದಿಗಳನ್ನು ಸರ್ಕಾರ ಮೇಲ್ವಿಚಾರಣೆ ಮಾಡಲಿದೆ ಎಂದೂ ಹೇಳಲಾಗಿದೆ.


















