ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರ ರೂಪದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಡಿ.ಬಿ. ನಾಗೇಶ ಮುಖ್ಯ ಪಾತ್ರ ವಹಿಸಿರುವುದು ಬೆಳಕಿಗೆ ಬಂದಿದೆ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ಹೇಳಿದೆ.
ಅಲ್ಲದೆ, ಪಾರ್ವತಿ ಸಿದ್ದರಾಮಯ್ಯನವರಿಂದ ವಶಪಡಿಸಿಕೊಳ್ಳಲಾಗಿರುವ ಜಮೀನಿನ ಅಂದಿನ ಮಾರುಕಟ್ಟೆ ಮೌಲ್ಯಕ್ಕೆ ಪ್ರತಿಯಾಗಿ 1,700 ಪಟ್ಟು ಮೌಲ್ಯದ ಪರಿಹಾರ (ಬದಲಿ ಸೈಟುಗಳನ್ನು) ನೀಡಲಾಗಿದೆ ಎಂಬರ್ಥದಲ್ಲಿ ಇಡಿ ವಿಷಯ ಉಲ್ಲೇಖಿಸಿದೆ. ವಶಪಡಿಸಿಕೊಂಡಿರುವ ಜಮೀನಿನ ಬೆಲೆ 3.24 ಲಕ್ಷ ರೂ. ಇದ್ದರೆ, ಅದಕ್ಕೆ ಪ್ರತಿಯಾಗಿ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 56 ಕೋಟಿ ರೂ. ಮೌಲ್ಯದ 14 ಸೈಟುಗಳನ್ನು ನೀಡಲಾಗಿದೆ ಎಂದು ಇಡಿ ಹೇಳಿಕೊಂಡಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ದೂರಿನ ಆಧಾರದ ಮೇಲೆ ಮೈಸೂರಿನ ಲೋಕಾಯುಕ್ತ ಪೊಲೀಸರು ಐಪಿಸಿ ವಿವಿಧ ಸೆಕ್ಷನ್ಗಳು ಹಾಗೂ ‘ಭ್ರಷ್ಟಾಚಾರ ತಡೆ ಕಾಯಿದೆ-1998’ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಈ ಎಫ್ ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಪ್ರಕರಣ ತನಿಖೆ ನಡೆಸುತ್ತಿದೆ ಎಂದು ಇಡಿ ಹೇಳಿದೆ.
ಸಿದ್ದರಾಮಯ್ಯ ಅವರು, ಮುಡಾ ವಶಪಡಿಸಿಕೊಂಡ 3 ಎಕರೆ 16 ಗುಂಟೆ ಜಾಗಕ್ಕೆ ಬದಲಿಯಾಗಿ ತಮ್ಮ ಪತ್ನಿಯ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆಯಲು ರಾಜಕೀಯ ಪ್ರಭಾವ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಾರ್ವತಿ ಅವರಿಗೆ ನೀಡಲಾದ 14 ಸೈಟ್ಗಳು ಮಾತ್ರವಲ್ಲದೆ, ಇನ್ನೂ ಅನೇಕ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪರಿಹಾರ ರೂಪದಲ್ಲಿ ಅಕ್ರಮವಾಗಿ ‘ಮುಡಾ’ ನೀಡಿದೆ ಎಂದು ಇಡಿ ಹೇಳಿದೆ.