ಕೊಡಗು: 18 ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವತಿಯ ಅಸ್ಥಿ ಪಂಜರ ಪತ್ತೆಯಾಗಿರುವ ಘಟನೆ ನಡೆದಿದೆ.
2006ರಲ್ಲಿ ಕಾಣೆಯಾಗಿದ್ದ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಬಾಲಕಿ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ 18 ವರ್ಷಗಳ ನಂತರ ಗೋವಾದ ಡ್ಯಾಂ ಒಂದರ ಬಳಿ ಹೂತಿಟ್ಟಿರುವುದು ಪತ್ತೆಯಾಗಿದೆ.
2006ರಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಬಡ ಕುಟುಂಬ ಅದು. ಮೊದಲ ಮಗಳು ಸಫಿಯಾಳನ್ನು ಕೇರಳದ ಕಾಸರಗೋಡಿನ ಹಂಸ ಎಂಬುವವರ ಮನಯಲ್ಲಿ ಮನೆ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ, ಬಾಲಕಿ ಕಾಣೆಯಾಗಿದ್ದಳು. ಈ ಬಗ್ಗೆ ಮೂರು ತಿಂಗಳು ಕಳೆದರೂ ಹಂಸನ ಕುಟುಂಬ ಏನೂ ಮಾಹಿತಿ ನೀಡಿರಲಿಲ್ಲ. ಕೊನೆಗೆ ಅಯ್ಯಂಗೇರಿ ಗ್ರಾಮಸ್ಥರು ಹಾಗೂ ಕಾಸರಗೋಡಿನ ಕೆವು ಸಾಮಾಜಿಕ ಸಂಘಟನೆಗಳು ಸೇರಿ ಅಲ್ಲಿ 86 ದಿನಗಳ ನಿರಂತರ ಪ್ರತಿಭಟನೆ ನಡೆಸಿದರು. ಆಗ ಕಾಸರಗೋಡು ಪೊಲೀಸರು ಹಂಸನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ಸಫಿಯಾಳನ್ನು ಕೊಲೆ ಮಾಡಿ ಗೋವಾದ ಡ್ಯಾಂ ಒಂದರ ಬಳಿ ಹೂತಿಟ್ಟಿರುವುದನ್ನು ಬಾಯಿ ಬಿಟ್ಟಿದ್ದಾನೆ.
ಕೊನೆಗೆ ಸ್ಥಳಕ್ಕೆ ತೆರಳಿ ನೋಡಿದಾಗ 20 ಅಡಿ ಆಳದ ಗುಂಡಿಯಲ್ಲಿ ಸಫಿಯಾಳ ಅಸ್ತಿಪಂಜರ ಪತ್ತೆಯಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹಂಸ, ಆತನ ಪತ್ನಿ ಹಾಗೂ ಸಹೋದರನಿಗೆ ಶಿಕ್ಷೆಯಾಗಿದೆ. ಆದ್ರೆ, ಇದನ್ನು ಪ್ರಶ್ನಿಸಿ ಹಂಸ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಅಲ್ಲಿಯೂ ಬಹಳ ವರ್ಷಗಳ ಕಾಲ ಕೇಸ್ ನಡೆದು 2019ರಲ್ಲಿ ಅಲ್ಲಿಯೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಆದರೂ ಸಫಿಯಾಳ ಅಸ್ತಿಪಂಜರ ಪೋಷಕರಿಗೆ ಸಿಕ್ಕಿಲ್ಲ. ಕೊನೆಗೆ ಬಾಲಕಿಯ ಕುಟುಂಬ ಕಾಸರಗೋಡಿಗೆ ತೆರಳಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಫಿಯಾಳ ಅಸ್ತಿಪಂಜರ ಕುಟುಂಬಕ್ಕೆ ಹಸ್ತಾಂತರವಾಗಿದೆ. ಬರೋಬ್ಬರಿ 18 ವರ್ಷಗಳ ನಂತರ ಈ ಅಸ್ಥಿಪಂಜರವನ್ನು ವಿಧಿ ವಿಧಾನದ ಮೂಲಕ ಮಂಗಳವಾರ ಅಂತ್ಯ ಸಂಸ್ಕಾರ ನಡೆಸಲಾಗಿದೆ.