ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಮಧ್ಯಂತ್ರ ಜಾಮೀನು ಸಿಕ್ಕಿದ್ದು, ಈಗ ಮನೆಗೆ ಹೊರಟಿದ್ದಾರೆ.
4 ತಿಂಗಳಿಂದ ಜೈಲಿನಲ್ಲಿ ಕಂಬಿ ಎಣಿಸಿದ್ದ ದರ್ಶನ್ ಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದು, ಬಳ್ಳಾರಿ ಜೈಲಿನಿಂದ ಅವರು ಹೊರಗೆ ಬಂದಿದ್ದಾರೆ. ಬಳ್ಳಾರಿಗೆ ತೆರಳಿರುವ ವಿಜಯಲಕ್ಷ್ಮಿ ಅವರು ಪತಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಬೆಂಗಳೂರಿಗೆ ಪ್ರಯಾಣ ನಡೆಸುತ್ತಿದ್ದಾರೆ.
ಚಾರ್ಜ್ಶೀಟ್ ಸಲ್ಲಿಕೆ ಆದ ನಂತರ ದರ್ಶನ್ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮೊದಲ ಬಾರಿ ವಿಚಾರಣೆ ನಡೆದಾಗ ಅವರ ಅರ್ಜಿ ವಜಾ ಆಗಿತ್ತು. ಇತ್ತೀಚೆಗೆ ಅನಾರೋಗ್ಯದ ಕಾರಣ ನೀಡಿ ಅವರು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ದರ್ಶನ್ ಪರ ವಾದ ಮಂಡಿಸಿದ್ದರು.
ಕೋರ್ಟ್ ಆದೇಶದ ಪ್ರತಿಯನ್ನು ದರ್ಶನ್ ಅವರ ಸಂಬಂಧಿ ಸುಶಾಂತ್ ನಾಯ್ಡು ಅವರು ಬಳ್ಳಾರಿ ಜೈಲಿಗೆ ತಂದಿದ್ದರು. ಜೈಲು ಅಧೀಕ್ಷಕಿ ಲತಾಗೆ ಆದೇಶದ ಪ್ರತಿ ನೀಡಲಾಯಿತು. ಈ ಪ್ರಕ್ರಿಯೆ ನಡೆಯುವಾಗ ಜೈಲಿನ ಹೊರಗೆ ಕಾರಿನಲ್ಲಿ ಕುಳಿತು ವಿಜಯಲಕ್ಷ್ಮಿ ಅವರು ದರ್ಶನ್ಗಾಗಿ ಕಾಯುತ್ತಿದ್ದರು. ದರ್ಶನ್ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಅನೇಕ ಅಭಿಮಾನಿಗಳು ಜೈಲಿನ ಮುಂಭಾಗ ಜೈಕಾರ ಹಾಕುತ್ತಿದ್ದರು. ಹೀಗಾಗಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಬೆನ್ನು ನೋವಿನ ಕಾರಣದಿಂದ ದರ್ಶನ್ ಅವರಿಗೆ ಸರ್ಜರಿಯ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದೆ. ವಿಚಾರಣಾಧೀನ ಖೈದಿಗೆ ಚಿಕಿತ್ಸೆ ಪಡೆಯುವ ಅವಕಾಶ ಇದೆ. ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವ ಕುರಿತು ಚಿಂತನೆ ನಡೆಸಿದ್ದಾರೆ.