ಬಳ್ಳಾರಿ: ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದೆ. ಸಂಡೂರು ಉಪಚುನಾವಣೆ (Sandur By Election) ಅಖಾಡ ಕೂಡ ಈ ಬಾರಿ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು (Bangaru Hanumanthu) ಪ್ರಚಾರಕ್ಕೆ ಜಂಟಿಯಾಗಿ ಮಾಜಿ ಸಚಿವ ಶ್ರೀರಾಮುಲು ಹಾಗೂ ಶಾಸಕ ಜನಾರ್ಧನ ರೆಡ್ಡಿ ಜಂಟಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.
2023ರ ಚುನಾವಣೆ ವೇಳೆ ಶ್ರೀರಾಮುಲು (Sriramulu) ಹಾಗೂ ಜನಾರ್ದನ ರೆಡ್ಡಿ (Janardhan Reddy) ಆಂತರಿಕ ಜಗಳದಿಂದಾಗಿ ದೂರವಾಗಿದ್ದರು. ಆದರೆ, ಈಗ ಮತ್ತೆ ಒಂದಾಗಿದ್ದು, ಜಂಟಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.
ಸಂಡೂರು ಚುನಾವಣೆ ವೇಳೆ ಶ್ರೀರಾಮುಲುಗಿಂತ ಮುಂಚೆನೇ ಜನಾರ್ದನ ರೆಡ್ಡಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದರು. ಆಂತರಿಕ ಸಮಸ್ಯೆಯಿಂದ ಹಿಂದೆ ಸರಿದಿದ್ದ ರಾಮುಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನವೊಲಿಸಿದ್ದರು. ಈಗ ಇಬ್ಬರೂ ಸೇರಿ ಪ್ರಚಾರ ಕಾರ್ಯ ನಡೆಸಿದ್ದಾರೆ. ರಾಮುಲು- ಜನಾರ್ದನ ರೆಡ್ಡಿ ಜಂಟಿ ಪ್ರಚಾರದ ನಡುವೆಯೂ ಬಿಜೆಪಿ ನಾಯಕರಿಗೆ ಒಳೇಟಿನ ಆತಂಕ ಕಾಡುತ್ತಿದೆ.
ಆದರೆ, ಕಾಂಗ್ರೆಸ್ ನಲ್ಲಿ ಒಗ್ಗಟ್ಟಿನ ಕೊರತೆ ಕಂಡು ಬರುತ್ತಿದ್ದು, ಹಿರಿಯ ನಾಯಕರು ಪ್ರಚಾರದಿಂದ ದೂರ ಉಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಸಂಕಷ್ಟ ಶುರುವಾಗಿದೆ. ಸಂಸದ ತುಕಾರಾಂ ಹಾಗೂ ಪತ್ನಿ ಅನ್ನಪೂರ್ಣ ತುಕಾರಾಂ ಇಬ್ಬರೇ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.