ಬೆಂಗಳೂರು: ರಾಜ್ಯದಲ್ಲಿ ವರುಣನಿಂದಾಗಿ ಜನ ಚಿಂತಾಕ್ರಾಂತರಾಗಿದ್ದಾರೆ. ಹಲವೆಡೆಯಂತೂ ಜನರ ಬದುಕು ಮೂರಾಬಟ್ಟೆಯಾಗಿದೆ. ಆದರೂ ಮಳೆರಾಯ ವಿರಾಮ ಪಡೆಯುತ್ತಿಲ್ಲ. ಆದರೆ, ಮುಂದಿನ 5 ದಿನ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಂತೂ ಜನ ಜೀವನ ಸಂಪೂರ್ಣವಾಗಿ ಬೀದಿಗೆ ಬಂದು ನಿಂತಿದೆ. ರಾಜಧಾನಿಯಲ್ಲಿ ಸಾಕಷ್ಟು ಅವಾಂತರಗಳೇ ಮಳೆಯಿಂದಾಗಿ ನಡೆದಿವೆ. ಇದೆಲ್ಲದರ ಮಧ್ಯೆ ರಾಜ್ಯದಲ್ಲಿ ಇನ್ನೂ ಐದು ದಿನ ವರುಣದೇವ ಆರ್ಭಟಿಸುವ ಮುನ್ಸೂಚನೆ ಇದೆ. ಅಕ್ಟೋಬರ್ 23ರ ವರೆಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಿದೆ. ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 23ರವರೆಗೆ ವ್ಯಾಪಕ ಮಳೆ ಆಗಲಿದೆ. ಉತ್ತರ ಒಳನಾಡಿನ ಕೆಲವು ಕಡೆ ಕೂಡ ಮಳೆ ಆಗುವ ಮುನ್ಸೂಚನೆ ಇದೆ.