ರಾಯ್ಪುರ : ಛತ್ತೀಸ್ಗಢದ ಬಲೋದಾ ಬಜಾರ್ ಜಿಲ್ಲೆಯ ಖಾರ್ವೆ ಎಂಬ ಗ್ರಾಮವು ಇದೀಗ ತೀವ್ರ ಆತಂಕ ಮತ್ತು ನಿಗೂಢ ಪ್ರಶ್ನೆಗಳೊಳಗೆ ಸಿಲುಕಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಗ್ರಾಮದ ಎಂಟು ಮಂದಿ ಯುವಕರು ಮತ್ತು ಪುರುಷರು ಒಂದೇ ರೀತಿಯ ಲಕ್ಷಣಗಳೊಂದಿಗೆ ಮೃತಪಟ್ಟಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಫೆಬ್ರವರಿ 6 ರಿಂದ ಮೇ 14 ರವರೆಗೆ ನಡೆದ ಈ ಸಾವುಗಳು ಕೇವಲ ಕಾಕತಾಳೀಯವಾಗಿರದೆ, ಇದರ ಹಿಂದೆ ಯಾವುದೋ ದೊಡ್ಡ ಪಿತೂರಿ ಅಥವಾ ಕ್ರಿಮಿನಲ್ ಕೃತ್ಯವಿದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಮಹಾನದಿ ನದಿಯ ದಡದಲ್ಲಿ ಹೂಳಲ್ಪಟ್ಟಿದ್ದರಿಂದ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುವಂತೆ ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದರು. ಒತ್ತಡಕ್ಕೆ ಮಣಿದ ಪೊಲೀಸರು ಒಟ್ಟು ಏಳು ಮೃತದೇಹಗಳನ್ನು ಹೊರತೆಗೆದು, ವೈಜ್ಞಾನಿಕ ತನಿಖೆಗಾಗಿ ರಾಯಪುರದ ಡಾ. ಭೀಮರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಗೆ ಕಳುಹಿಸಿದ್ದಾರೆ.
ವಿಷಪ್ರಾಷನದ ಆರೋಪ
ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ನೇರವಾಗಿ ಸ್ಥಳೀಯ ನಿವಾಸಿ ರಾಮ್ಸೇ ಜೈಸ್ವಾಲ್ ಎಂಬವರ ಮೇಲೆ ಬೆರಳು ಮಾಡುತ್ತಿದ್ದಾರೆ. ಜೈಸ್ವಾಲ್ ಪೂರೈಸುತ್ತಿದ್ದ ಮದ್ಯದಲ್ಲಿ ‘ಸುಹಾಗ’ (ಬೋರಾಕ್ಸ್) ಎಂಬ ವಿಷಕಾರಿ ಪದಾರ್ಥವನ್ನು ಬೆರೆಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಪ್ರಬಲ ಶಂಕೆ. ಮೃತಪಟ್ಟವರೆಲ್ಲರೂ ಸಾವಿನ ಮುನ್ನ ಈ ಮದ್ಯ ಸೇವಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸಂಬಂಧಿಕರು ತಿಳಿಸಿದ್ದಾರೆ. ಕೇವಲ ಮೃತಪಟ್ಟವರು ಮಾತ್ರವಲ್ಲದೆ, ಇದೇ ಮದ್ಯ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ಬದುಕುಳಿದಿರುವ ಕಾರ್ತಿಕ್ ಎಂಬಾತ, ತೀವ್ರ ವಾಂತಿ ಮತ್ತು ಅಸ್ವಸ್ಥತೆಯನ್ನು ಅನುಭವಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಮದ್ಯ ಸೇವನೆಯ ನಂತರವೇ ಸಾವುಗಳು ಸಂಭವಿಸಿರುವುದರಿಂದ, ಇದು ವ್ಯವಸ್ಥಿತವಾಗಿ ನಡೆದ ವಿಷಪ್ರಾಶನ ಎಂದು ಗ್ರಾಮದ ಪಂಚಾಯತ್ ಪ್ರತಿನಿಧಿ ಮಾಯಾರಾಮ್ ನವರಂಗೆ ಸೇರಿದಂತೆ ಅನೇಕರು ಆರೋಪಿಸಿದ್ದಾರೆ.
ಮಂತ್ರ-ತಂತ್ರ, ಗುಪ್ತನಿಧಿ, ಮೂಢನಂಬಿಕೆಯ ಅನುಮಾನ
ವಿಷದ ಹಾವಳಿಯ ನಡುವೆಯೇ, ಗ್ರಾಮದಲ್ಲಿ ಮಂತ್ರ-ತಂತ್ರ ಮತ್ತು ಗುಪ್ತನಿಧಿಯ ಕುರಿತಾದ ಸುದ್ದಿಗಳು ಹೆಚ್ಚು ಭಯ ಹುಟ್ಟಿಸಿವೆ. ಆರೋಪಿ ರಾಮ್ಸೇ ಜೈಸ್ವಾಲ್ ಗುಪ್ತನಿಧಿಯ ಬಗ್ಗೆ ಆಗಾಗ್ಗೆ ಚರ್ಚಿಸುತ್ತಿದ್ದ ಮತ್ತು ಅದನ್ನು ಹುಡುಕಲು ಧಾರ್ಮಿಕ ವಿಧಿ-ವಿಧಾನಗಳ ನೆಪದಲ್ಲಿ ವಿಚಿತ್ರ ಆಚರಣೆಗಳನ್ನು ಮಾಡುತ್ತಿದ್ದ ಎಂಬ ಆರೋಪಗಳು ಕೇಳಿಬರುತ್ತಿವೆ. ಮೃತಪಟ್ಟವರಿಗೆ ಈ ಮಂತ್ರ-ತಂತ್ರಗಳೊಂದಿಗೆ ಸಂಪರ್ಕವಿದೆಯೇ ಅಥವಾ ಅವರು ಬಲಿಯಾಗಿದ್ದಾರೆಯೇ ಎಂಬ ಅನುಮಾನಗಳು ಗ್ರಾಮಸ್ಥರನ್ನು ಕಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಆಡಿಯೋ ತುಣುಕುಗಳಲ್ಲಿ, ಆರೋಪಿಯು ಗ್ರಾಮಸ್ಥರನ್ನು ಪೊಲೀಸ್ ದೂರು ನೀಡದಂತೆ ತಡೆಯುತ್ತಿರುವುದು ಕೇಳಿಬಂದಿದೆ. ಸಾವುಗಳು ಸಂಭವಿಸುತ್ತಿದ್ದಂತೆ ದೈವಿಕ ಕೋಪ ಎಂದು ಭಾವಿಸಿ ಗ್ರಾಮದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗಿತ್ತು, ಆದರೆ ಸಾವುಗಳು ನಿಲ್ಲದಿದ್ದಾಗ ಮಾತ್ರ ಜನ ಎಚ್ಚೆತ್ತುಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಪ್ರಸ್ತುತ ಪ್ರಕರಣವು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಸ್ಪಿ ಒ.ಪಿ. ಶರ್ಮಾ ಅವರ ನೇತೃತ್ವದಲ್ಲಿ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರಾದರೂ, ಯಾವುದೇ ನಿರ್ದಿಷ್ಟ ತೀರ್ಮಾನಕ್ಕೆ ಬರಲು ಮರಣೋತ್ತರ ಪರೀಕ್ಷೆ ಮತ್ತು ವಿಷವಿಜ್ಞಾನದ (toxicology) ವರದಿಗಳು ಬರುವವರೆಗೆ ಕಾಯಬೇಕಿದೆ. ಆರೋಪಿ ಜೈಸ್ವಾಲ್ನ ಚಟುವಟಿಕೆಗಳು ಮತ್ತು ಸಾವಿನ ಪ್ರಕರಣಗಳಿಗೆ ಇರುವ ಸಂಬಂಧವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗುಪ್ತನಿಧಿ ಅಥವಾ ನರಬಲಿಯಂತಹ ಯಾವುದೇ ಘಟನೆಗಳಿಗೆ ಇಲ್ಲಿಯವರೆಗೆ ಯಾವುದೇ ನೇರ ಸಾಕ್ಷ್ಯ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದರೂ, ಗ್ರಾಮಸ್ಥರ ಭಯ ಮತ್ತು ಆಕ್ರೋಶ ಮಾತ್ರ ಕಡಿಮೆಯಾಗಿಲ್ಲ. ವರದಿಗಳು ಬಂದ ನಂತರವಷ್ಟೇ ಎಂಟು ಮಂದಿಯ ಸಾವಿನ ರಹಸ್ಯ ಬಯಲಾಗಲಿದೆ.
ಇದನ್ನೂ ಓದಿ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ : ಈ ಜಿಲ್ಲೆಯವರಿಗೆ ಶುಭ ಸುದ್ದಿ


















