ಬೆಂಗಳೂರು : 2,000 ಕೋಟಿಗೂ ಹೆಚ್ಚು ಮೌಲ್ಯದ ಪಾಲಿಕೆ ಸ್ವತ್ತನ್ನು ಕಾನೂನುಬಾಹಿರವಾಗಿ ಅಡಮಾನವಿಟ್ಟು 754 ಕೋಟಿ ಸಾಲ ಪಡೆದು ವಂಚನೆ ನಡೆಸಲಾಗಿದೆ ಎಂದು ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ED)ಗೆ ದೂರು ಸಲ್ಲಿಸಲಾಗಿದೆ.
ಜಾಗೃತ ಮತದಾರರ ವೇದಿಕೆ (ರಿ) ಕಾರ್ಯದರ್ಶಿ ಗಣೇಶ್ ಸಿಂಗ್ ಬಿ. ಅವರು ಈ ಸಂಬಂಧ 1,430 ಪುಟಗಳ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ದೂರಿನ ಪ್ರಕಾರ, ಕೋರಮಂಗಲದ ಈಜಿಪುರ ಗ್ರಾಮದ ಸರ್ವೆ ಸಂಖ್ಯೆ 37, 38, 39, 40, 41, 42, 52, 53, 54, 55, 56, 59, 60 ಮತ್ತು 61ರಲ್ಲಿ ಇರುವ 15.64 ಎಕರೆ ವಿಸ್ತೀರ್ಣದ ಪಾಲಿಕೆ ಸ್ವತ್ತಿನ ಮೌಲ್ಯ 2,000 ಕೋಟಿಗೂ ಅಧಿಕವಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಕುಟುಂಬಗಳಿಗೆ 1,640 ಮನೆಗಳನ್ನು ನಿರ್ಮಿಸುವ ಉದ್ದೇಶದಿಂದ 2012ರಲ್ಲಿ ಈ ಜಮೀನನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು ಎಂದು ತಿಳಿಸಲಾಗಿದೆ.
ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕಿದ್ದರೂ, 12 ವರ್ಷಗಳು ಕಳೆದರೂ ಯಾವುದೇ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಬದಲಾಗಿ, ಯೋಜನೆಗೆ ನೀಡಲಾದ ಸರ್ಕಾರಿ ಸ್ವತ್ತನ್ನು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡಮಾನವಿಟ್ಟು 754 ಕೋಟಿ ಸಾಲ ಪಡೆದುಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಇಂಡಿಯನ್ ಬುಲ್ಸ್ (India Bulls Housing Finance Ltd.) ಸಂಸ್ಥೆಯಿಂದ ಸಾಲ ಪಡೆಯಲಾಗಿದ್ದು, ಇದುವರೆಗೆ ಸಾಲ ಮರುಪಾವತಿ ಮಾಡದ ಕಾರಣ ಅಡಮಾನ ಇಟ್ಟಿರುವ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಉದಯ್ ಗರುಡಾಚಾರ್ ನೇತೃತ್ವದ ಸಂಸ್ಥೆಯ ನಿರ್ದೇಶಕರು ಹಾಗೂ ಅಂದಿನ ಬಿಬಿಎಂಪಿ ಆಯುಕ್ತರಾಗಿದ್ದ ಜಿ. ಕುಮಾರ್ ನಾಯಕ್ ಮತ್ತು ಮಂಜುನಾಥ್ ಪ್ರಸಾದ್ ಅವರುಗಳು ನಿಯಮ ಉಲ್ಲಂಘಿಸಿ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಭ್ರಷ್ಟಾಚಾರ, ವಂಚನೆ ಹಾಗೂ ಅಧಿಕಾರ ದುರುಪಯೋಗದ ಆರೋಪಗಳಡಿ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಾರಿ ನಿರ್ದೇಶನಾಲಯ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಪ್ರಕರಣದ ಕುರಿತು ತನಿಖಾ ನಡೆಸಿ ಜಿಬಿಎ ಆಸ್ತಿಯನ್ನೂ ಮರುವಶಕ್ಕೆ ಪಡೆಯಬೇಕು ಎಂದು ದೂರುದಾರರು ಮಾನವಿ ಮಾಡಿದ್ದಾರೆ.
ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್ : ಬಡ್ಡಿ ರಹಿತವಾಗಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.. ಯಾವುದಿದು ಯೋಜನೆ?



















