ಬೆಂಗಳೂರು : ಕರ್ನಾಟಕ ಸರ್ಕಾರವು ಸಹಕಾರಿ ಕೃಷಿ ಸಾಲ ಯೋಜನೆಯ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸಹಕಾರಿ ಸಂಘಗಳ ಮೂಲಕ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಅಲ್ಪಾವಧಿ ಕೃಷಿ ಸಾಲವನ್ನು ನೀಡುತ್ತಿದೆ. ರೈತರು ಯಾವುದೇ ಬಡ್ಡಿ ಇಲ್ಲದೆ ಸಾಲವನ್ನು ಪಡೆಯುವ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಹಣವನ್ನು ತೊಡಗಿಸಿಕೊಳ್ಳಬಹುದಾಗಿದೆ. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳು, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ (DCC Bank) ರೈತರು ಸಾಲಪಡೆಯಬಹುದಾಗಿದೆ. ಕೃಷಿಯ ಉಪಕಸುಬುಗಳಾದ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಹಾಗೂ ರೇಷ್ಮೆ ಶೆಡ್ ನಿರ್ಮಾಣಕ್ಕೂ 5 ಲಕ್ಷ ರೂಪಾಯಿವರೆಗೆ ಸಾಲ ಸಿಗಲಿದೆ. ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿರುವುದರಿಂದ ಹಲವು ಚಟುವಟಿಕೆಗಳಿಗೆ ರೈತರು ಸಾಲದ ನೆರವು ಪಡೆಯಬಹುದಾಗಿದೆ. ಸಾಲದ ಮರುಪಾವತಿಗೆ ಒಂದು ವರ್ಷ ಸಮಯ ಇರುತ್ತದೆ. ಇಷ್ಟರೊಳಗೆ ಸಾಲ ಮರುಪಾವತಿಸಿದರೆ ಬಡ್ಡಿ ಇರುವುದಿಲ್ಲ.
ನಿಯಮಗಳು ಏನೇನು?
• ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
• ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲ ನೀಡಲು ಮೊದಲ ಆದ್ಯತೆ
• ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿರಬೇಕು.
• ಕೃಷಿ ಚಟುವಟಿಕೆಗಳಿಗೆ ಮಾತ್ರ ಈ ಸಾಲವನ್ನು ಬಳಸಬೇಕು.
ಅಗತ್ಯ ದಾಖಲೆಗಳು
- ಭೂಮಿಯ ದಾಖಲೆ : ಪಹಣಿ ಮ್ಯುಟೇಷನ್ ಕಾಪಿ.
- ಗುರುತಿನ ಚೀಟಿ: ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ.
- ಸದಸ್ಯತ್ವ: ಸಹಕಾರಿ ಸಂಘದ ಸದಸ್ಯತ್ವದ ಪಾಸ್ ಬುಕ್/ದಾಖಲೆ.
- ಬ್ಯಾಂಕ್ ಮಾಹಿತಿ: ಉಳಿತಾಯ ಖಾತೆಯ ಪಾಸ್ ಬುಕ್ ಪ್ರತಿ.
- ಇತರೆ: ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು ಮತ್ತು ಕೃಷಿ ಜಮೀನಿನ ಪಾಸ್ ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ವ್ಯಾಪ್ತಿಗೆ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೇರವಾಗಿ ಭೇಟಿ ನೀಡಬೇಕು. ಅಲ್ಲಿನ ಸಿಬ್ಬಂದಿಯಿಂದ ಬಡ್ಡಿ ರಹಿತ ಸಾಲದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ. ಅರ್ಜಿಯಲ್ಲಿ ಕೇಳಲಾದ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ. ಭರ್ತಿ ಮಾಡಿದ ಅರ್ಜಿಯೊಂದಿಗೆ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಸಂಬಂಧಪಟ್ಟ ಸಹಕಾರಿ ಸಂಘದ ಅಧಿಕಾರಿಗೆ ಸಲ್ಲಿಸಿ. ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ನಿಮ್ಮ ಜಮೀನಿನ ವಿವರಗಳನ್ನು ಖಚಿತಪಡಿಸಿಕೊಂಡ ನಂತರ ಸಾಲ ಮಂಜೂರು ಮಾಡುತ್ತಾರೆ.
ಇದನ್ನೂ ಓದಿ : ಲಾರ್ಡ್ಸ್ ಟೆಸ್ಟ್ ಪಂದ್ಯದ ನಡುವೆ ನೈಟ್ಕ್ಲಬ್ ವಿವಾದ : ಬೆನ್ಸ್ಟೋಕ್ಸ್, ಅಟ್ಕಿನ್ಸನ್ ವಿರುದ್ಧ ಇಸಿಬಿ ತನಿಖೆ!


















