ರಾಂಚಿ : ಸಾಮಾಜಿಕ ಜಾಲತಾಣಗಳ ಮೂಲಕ ಮುಂಚೂಣಿಗೆ ಬಂದು ಶನಿವಾರವಷ್ಟೇ ದೆಹಲಿಯಲ್ಲಿ ಮೊದಲ ಬಾರಿಗೆ ಬೃಹತ್ ಪ್ರತಿಭಟನೆ ನಡೆಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನಬಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಬೆನ್ನಲ್ಲೇ ಜಾರ್ಖಂಡ್ನ ರಾಂಚಿಯಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ಕುಳಿತುಕೊಂಡು ಭಾರತದ ಯುವ ಪೀಳಿಗೆಯನ್ನು ನಕಾರಾತ್ಮಕ ರಾಜಕಾರಣಕ್ಕೆ ದೂಡಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ. ಆದರೆ ದೇಶದ ಯುವಕರು ಯಾರ ಕೈಯಲ್ಲೂ ಕೈಗೊಂಬೆಗಳಾಗುವುದಿಲ್ಲ ಎಂದು ಹೇಳಿದ್ದಾರೆ.
ಸಂವಾದದಲ್ಲಿ ‘ಕಾಕ್ರೋಚ್ ಪಾರ್ಟಿ’ಯ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಮಾತನಾಡಿದ ನಿತಿನ್ ನಬಿನ್, “ಇಂದಿನ ಯುವ ಪೀಳಿಗೆಯು ದೇಶದ ನಿರ್ಮಾಣ ಮತ್ತು ತಮ್ಮ ಉಜ್ವಲ ಭವಿಷ್ಯದತ್ತ ಗಮನ ಹರಿಸಿದೆ. ಆದರೆ ಕೆಲವರು ದೇಶದ ಯುವಕರನ್ನು ವ್ಯವಸ್ಥೆಯ ವಿರೋಧಿಗಳು ಎಂದು ಬಿಂಬಿಸಲು ಹೊರಟಿದ್ದಾರೆ. ಭಾರತದ ಯುವಕರನ್ನು ನಕಾರಾತ್ಮಕ ರಾಜಕೀಯಕ್ಕೆ ಎಳೆಯಲು ಯತ್ನಿಸುತ್ತಿರುವವರಿಗೆ ನಾನು ಎಚ್ಚರಿಕೆ ನೀಡಲು ಬಯಸುತ್ತೇನೆ; ನಮ್ಮ ಯುವಕರು ಯಾವಾಗಲೂ ಸಕಾರಾತ್ಮಕ ರಾಜಕೀಯದಲ್ಲೇ ತೊಡಗಿಸಿಕೊಳ್ಳುತ್ತಾರೆ” ಎಂದರು. ಇದೇ ವೇಳೆ ಅಮೆರಿಕದಲ್ಲಿದ್ದುಕೊಂಡು ಈ ಚಳವಳಿಯ ನೇತೃತ್ವ ವಹಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಅವರು, ವಿದೇಶದಲ್ಲಿ ಕುಳಿತು ಭಾರತದ ಯುವಕರು ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ದೆಹಲಿ ಬೀದಿಯಲ್ಲಿ ‘ಕಾಕ್ರೋಚ್’ ಪ್ರತಿಭಟನೆ
ನೀಟ್ (NEET), ಸಿಬಿಎಸ್ಇ (CBSE), ಸಿಯುಇಟಿ (CUET) ಮತ್ತು ಎಸ್ಎಸ್ಸಿ (SSC)ಯಂತಹ ಪ್ರಮುಖ ಪ್ರವೇಶ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ವಿರೋಧಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ನವದೆಹಲಿಯ ಜಂತರ್ ಮಂತರ್ನಲ್ಲಿ ನೂರಾರು ಯುವಕರು ಪ್ರತಿಭಟನೆ ನಡೆಸಿದ್ದರು. ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಆನ್ಲೈನ್ ಮೂಲಕ ಆರಂಭವಾದ ಈ ಯುವ ಆಂದೋಲನಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ಹಿಂದೆ ಪ್ರತಿಭಟನಾಕಾರರನ್ನು ‘ಸಮಾಜದ ಜಿರಳೆಗಳು ಮತ್ತು ಪರಾವಲಂಬಿಗಳು’ ಎಂದು ಕರೆದಿದ್ದರು ಎನ್ನಲಾದ ಹೇಳಿಕೆಯೇ ಪ್ರೇರಣೆಯಾಗಿದೆ ಎಂದು ಹೇಳಲಾಗಿದೆ. ಅಮೆರಿಕದಿಂದ ಆಗಮಿಸಿದ ಸಿಜೆಪಿ ಮುಖ್ಯಸ್ಥ ಅಭಿಜಿತ್ ದಿಪ್ಕೆ ಮತ್ತು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, 2000ಕ್ಕೂ ಅಧಿಕ ಯುವಜನರು ಪಾಲ್ಗೊಂಡಿದ್ದರು.
ಸಿಜೆಪಿ ಬೆನ್ನಿಗೆ ನಿಂತ ವಿಪಕ್ಷಗಳು; ಕಾಂಗ್ರೆಸ್ ದೂರ
ಈ ನಡುವೆ, ಯುವಕರ ಈ ಪ್ರತಿಭಟನೆಗೆ ಪ್ರಮುಖ ವಿರೋಧ ಪಕ್ಷಗಳಾದ ಆಮ್ ಆದ್ಮಿ ಪಾರ್ಟಿ (ಎಎಪಿ), ಸಮಾಜವಾದಿ ಪಾರ್ಟಿ (ಎಸ್ಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬೆಂಬಲ ಘೋಷಿಸಿವೆ. “ಯುವಕರ ಆಕ್ರೋಶವನ್ನು ದೇಶದ್ರೋಹ ಎನ್ನುವ ಬದಲು ಪ್ರಧಾನಿ ಮೋದಿ ಅವರು ತಕ್ಷಣ ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು” ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಕೂಡ ಯುವಕರ ಹೋರಾಟವನ್ನು ಶ್ಲಾಘಿಸಿದ್ದಾರೆ. ಆದರೆ, ಈ ಇಡೀ ಆಂದೋಲನದ ಹಿಂದೆ ಆಮ್ ಆದ್ಮಿ ಪಾರ್ಟಿಯ ಕೈವಾಡವಿದೆ ಎಂಬ ಶಂಕೆಯಿಂದಾಗಿ ಕಾಂಗ್ರೆಸ್ ಪಕ್ಷವು ಈ ಪ್ರತಿಭಟನೆಯಿಂದ ದೂರ ಉಳಿದಿದೆ.
ಇದನ್ನೂ ಓದಿ : ಮೋದಿ ಸರ್ಕಾರವೇ ಲಾಟರಿ ಆರಂಭಿಸಿತಾ? ಏನಿದೆ ಇ-ಮೇಲ್ ಹಿಂದಿನ ವಾಸ್ತವ?


















