ಬೀದರ್ : ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಬೀದರ್ ನಗರದ ಗುಂಪಾ ರಿಂಗ್ ರೋಡ್ ಸಮೀಪ ನಡೆದಿದೆ. ನಿನ್ನೆ ರಾತ್ರಿ ಸುಮಾರು 8 ಗಂಟೆ ವೇಳೆಗೆ ನಡೆದ ಈ ಘಟನೆಯಲ್ಲಿ ಶೋಭಾ ಹಾಗೂ ಅವರ ಪುತ್ರಿ ಉಷಾ ಗಾಯಗೊಂಡಿದ್ದು, ಇಬ್ಬರೂ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿ ಸತೀಶ್ ರೆಡ್ಡಿ, ಶೋಭಾ ಅವರ ಮನೆಗೆ ನುಗ್ಗಿ ಮೊದಲು ಶೋಭಾ ಅವರ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾನೆ. ತಾಯಿಯನ್ನು ರಕ್ಷಿಸಲು ಬಂದ ಮಗಳು ಉಷಾ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು ಆರು ವರ್ಷಗಳ ಹಿಂದೆ ಶೋಭಾ ಅವರು ಸತೀಶ್ ರೆಡ್ಡಿಗೆ ₹3 ಲಕ್ಷ ಸಾಲವಾಗಿ ನೀಡಿದ್ದರು. ಹಲವು ಬಾರಿ ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡಿದರೂ ಹಣ ನೀಡದ ಆರೋಪಿ, ಮತ್ತೊಮ್ಮೆ ಹಣ ಕೇಳಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಗಾಯಾಳುಗಳಿಗೆ ಬೀದರ್ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಸತೀಶ್ ರೆಡ್ಡಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ : ದಾಂಡೇಲಿಯಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ : ಮೂವರು ಪೊಲೀಸ್ ವಶಕ್ಕೆ!


















