ಚೆನ್ನೈ : ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಷಾ ಅವರನ್ನು ಗುರಿಯಾಗಿಸಿಕೊಂಡು ಆಡಿದ ದ್ವಂದ್ವಾರ್ಥ ಹಾಗೂ ಅಸಭ್ಯ ಮಾತುಗಳು ಈಗ ರಾಜ್ಯಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿವೆ. ಕಾವೇರಿ ನೀರು ಹಂಚಿಕೆ ವಿವಾದದ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಟೀಕಿಸುವ ಭರದಲ್ಲಿ ನಟಿ ತ್ರಿಷಾ ಅವರ ಬಗ್ಗೆ ಪರೋಕ್ಷವಾಗಿ ಅಶ್ಲೀಲ ಹೇಳಿಕೆ ನೀಡಿದ್ದ ಉದಯನಿಧಿ ನಡೆಗೆ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್, ಗಾಯಕಿ ಚಿನ್ಮಯಿ ಶ್ರೀಪಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಅತ್ಯಂತ ನಿಕೃಷ್ಟ ಮನಸ್ಥಿತಿ: ಖುಷ್ಬೂ ಕಿಡಿ
ಉದಯನಿಧಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ನಟಿ ಖುಷ್ಬೂ ಸುಂದರ್, ಈ ಮಾತುಗಳು ಅತ್ಯಂತ ಅಸಭ್ಯ ಮತ್ತು ಮಹಿಳಾ ಕುಲಕ್ಕೆ ಮಾಡಿದ ಅಪಮಾನ ಎಂದು ಬಣ್ಣಿಸಿದ್ದಾರೆ. “ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಮಹಿಳೆಯರನ್ನು ರಾಜಕೀಯ ದಾಳಗಳನ್ನಾಗಿ ಬಳಸುವುದು ಸಂಪೂರ್ಣವಾಗಿ ತಪ್ಪು. ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಒಂದು ರೇಖೆ ಅಥವಾ ಗೌರವದ ಗಡಿ ಇರಬೇಕು. ಉದಯನಿಧಿ ಅವರು ತಕ್ಷಣವೇ ನಟಿ ತ್ರಿಷಾ ಅವರ ಬಳಿ ಸಾರ್ವಜನಿಕವಾಗಿ ಬೇಷರತ್ ಕ್ಷಮಾಪಣೆ ಕೇಳಬೇಕು. ಅವರಿಗೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ಮತ್ತು ಸೌಜನ್ಯ ಇದೆಯೇ ಎಂದು ನೋಡೋಣ” ಎಂದು ಸವಾಲು ಹಾಕಿದ್ದಾರೆ.
ಯುವ ನಾಯಕರಿಂದ ಇಂಥ ಮಾತು ನಿರೀಕ್ಷಿಸಿರಲಿಲ್ಲ: ಚಿನ್ಮಯಿ ಬೇಸರ
ಇತ್ತ ಗಾಯಕಿ ಚಿನ್ಮಯಿ ಶ್ರೀಪಾದ್ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬಹಿರಂಗ ಪತ್ರ ಬರೆದಿದ್ದು, ರಾಜಕೀಯಕ್ಕೆ ಯಾವುದೇ ಸಂಬಂಧವಿಲ್ಲದ ಮಹಿಳೆಯರನ್ನು ಮಧ್ಯಕ್ಕೆ ಎಳೆದು ತರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. “ಹಳೆಯ ತಲೆಮಾರಿನ ರಾಜಕಾರಣಿಗಳು ಮಹಿಳೆಯರ ವಿರುದ್ಧ ಇಂತಹ ಕೆಟ್ಟ ಭಾಷೆ ಬಳಸುವುದು ಸಾಮಾನ್ಯವೆಂದಾಗಿತ್ತು. ಆದರೆ ಹೊಸ ತಲೆಮಾರಿನ ಯುವ ನಾಯಕರು ಉತ್ತಮ ಉದಾಹರಣೆಯಾಗುತ್ತಾರೆ ಎಂದು ಭಾವಿಸಿದ್ದೆವು. ಆದರೆ ಇವರಿಂದಲೂ ಅದೇ ರೀತಿಯ ನೀಚ ನಡವಳಿಕೆ ವ್ಯಕ್ತವಾಗಿರುವುದು ತೀವ್ರ ನಿರಾಶಾದಾಯಕ. ವೇದಿಕೆಯಲ್ಲಿದ್ದಾಗ ಜನರನ್ನು ಶಾಂತಗೊಳಿಸುವ ಬದಲು ಅವರ ಜೊತೆಗೂಡಿ ಮತ್ತಷ್ಟು ಕೆಟ್ಟದಾಗಿ ಮಾತನಾಡಿರುವುದು ಖಂಡನೀಯ” ಎಂದು ಬರೆದುಕೊಂಡಿದ್ದಾರೆ.
ಕೊನೆಗೂ ಬಂಧನ
ತಂಜಾವೂರಿನ ರ್ಯಾಲಿಯಲ್ಲಿ ಸಭಿಕರೊಬ್ಬರು “ತ್ರಿಷಾ, ತ್ರಿಷಾ” ಎಂದು ಕೂಗಿದಾಗ, ಉದಯನಿಧಿ ಅವರು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ನಟಿಯನ್ನು ಜೋಡಿಸಿ ಸಾರ್ವಜನಿಕವಾಗಿ ಅಸಭ್ಯವಾಗಿ ಮಾತನಾಡಿದ್ದರು. ಈ ವಿವಾದಾತ್ಮಕ ವಿಡಿಯೋ ಹರಿದಾಡುತ್ತಿದ್ದಂತೆ ಮಹಿಳಾ ಆಯೋಗ ಮತ್ತು ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು. ಇದೀಗ ತಮಿಳುನಾಡು ಪೊಲೀಸರು ಮಹಿಳೆಯ ಘನತೆಗೆ ಧಕ್ಕೆ ತಂದಿರುವುದು ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ಆರೋಪದಡಿ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಜತೆಗೆ, ಇಂದು ಬೆಳಗ್ಗೆ ಅವರ ನಿವಾಸಕ್ಕೆ ತೆರಳಿ ಉದಯನಿಧಿಯವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ನಟಿ ತ್ರಿಷಾ ಬಗ್ಗೆ ವಿವಾದಾತ್ಮಕ ಹೇಳಿಕೆ : ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಬಂಧನ



















