ಬೈಂದೂರು : ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ದಿನದ ಒಂಡೆರಡು ಗಂಟೆಗಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೈಹಿಕವಾಗಿ ಉತ್ತಮ ಆರೋಗ್ಯ ಹಾಗೂ ಉತ್ತಮ ಸ್ನೇಹಿತರನ್ನು ಪಡೆಯಬಹುದು. ಕ್ರೀಡೆಯಲ್ಲಿನ ಸೋಲು ಗೆಲುವು, ಏಳು ಬೀಳುಗಳ ಪಾಠ ಕಲಿಯುವ ಮೂಲಕ ಜೀವನದ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದು ಕುಂದಾಪುರ ಟೋರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಚೇರ್ಮನ್ ಗೌತಮ್ ಶೆಟ್ಟಿ ಹೇಳಿದರು.

ಶನಿವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ವಿಕ್ರಂ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಸಹಭಾಗಿತ್ವದೊಂದಿಗೆ ಉಡುಪಿ ಜಿಲ್ಲಾ ಇಂಟರ್ ಕ್ಯಾಂಪಸ್ ಅಕಾಡೆಮಿ ಆಟಗಾರರ ಅಂಡರ್ 23 ಲೆದರ್ ಬಾಲ್ ಟಿ-20 ನಾಕೌಟ್ ಮಾದರಿಯ ಕ್ರಿಕೆಟ್ ಪಂದ್ಯಾಟ “ವಿಕ್ರಂ ಟ್ರೋಫಿ-2026” ಉದ್ಘಾಟಿಸಿ ಮಾತನಾಡಿ ಕ್ರೀಡೆಯಲ್ಲಿ ಛಲ, ಗುರಿ, ಹಸಿವು, ಶಿಸ್ತು, ಗಂಭೀರತೆಯನ್ನು ಅಳವಡಿಸಿಕೊಳ್ಳವ ಮೂಲಕ ಯಶಸ್ಸನ್ನು ಕಾಣಬಹುದು ಎಂದರು.

ರೋಟರಿ ಜಿಲ್ಲೆ 3182 ಸಹಾಯಕ ಗವರ್ನರ್ ರೊ. ಐ. ನಾರಾಯಣ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸೀಯೇಶನ್ ಕಾರ್ಯದರ್ಶಿ ರೆನ್ ಟ್ರೆವರ್ ಡಯಾಸ್, ವಿಶ್ವವಿದ್ಯಾಲಯ ಮಾಜಿ ಕ್ರಿಕೆಟ್ ಆಟಗಾರ ಕುಂದಾಪುರ ಚಕ್ರವರ್ತಿ ಕ್ರಿಕೆರ್ಸ್ನ ಪ್ರದೀಪ್ ವಾಜ್, ವಿಕ್ರಂ ಕ್ರಿಕೆಟ್ ಕ್ಲಬ್ ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ, ವಿಕ್ರಂ ಸದಸ್ಯ ಮೋಸಂ ಉಪಸ್ಥಿತರಿದ್ದರು.

ಮೂರ್ತಿ ಡಿ. ಪಡುವರಿ ಕಾರ್ಯಕ್ರಮದಲ್ಲಿ ಪ್ರಾರ್ಥಿಸಿದರು. ವಿಕ್ರಂ ಕ್ರಿಕೆಟ್ ಕ್ಲಬ್ ಅಧ್ಯಕ್ಷ ದಿನೇಶ ಗಾಣಿಗ ಸ್ವಾಗತಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ವಂದಿಸಿ, ನಿರೂಪಿಸಿದರು.

ಇದನ್ನೂ ಓದಿ : ಹಾರ್ದಿಕ್ ಪಾಂಡ್ಯ ಯುಗಕ್ಕೆ ಅಂತ್ಯ ಹಾಡಿ, ಜಸ್ಪ್ರೀತ್ ಬುಮ್ರಾಗೆ ನಾಯಕತ್ವ ನೀಡಿ ; ಮುಂಬೈ ಇಂಡಿಯನ್ಸ್ಗೆ ಸಂಜಯ್ ಮಂಜ್ರೇಕರ್ ಸಲಹೆ


















