ಚೆನ್ನೈ : ಐಪಿಎಲ್ 2026ರ ಋತುವಿನ ಭರಾಟೆ ನಡೆಯುತ್ತಿರುವಾಗಲೇ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ವಿಜಯ್ ಶಂಕರ್ ಅಚ್ಚರಿಯ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. 36 ವರ್ಷದ ತಮಿಳುನಾಡು ಮೂಲದ ಈ ಕ್ರಿಕೆಟಿಗ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಎಲ್ಲಾ ಮಾದರಿಯ ದೇಶೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ SA20, ಯುಎಇಯ ILT20 ಮತ್ತು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL) ಸೇರಿದಂತೆ ವಿಶ್ವದಾದ್ಯಂತ ನಡೆಯುವ ವಿವಿಧ ಟಿ-20 ಫ್ರಾಂಚೈಸಿ ಲೀಗ್ಗಳಲ್ಲಿ ಹೊಸ ಅವಕಾಶಗಳನ್ನು ಅರಸುವ ಉದ್ದೇಶದಿಂದ ಅವರು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅವರು ಯಾವುದೇ ಫ್ರಾಂಚೈಸಿಯ ಭಾಗವಾಗಿರಲಿಲ್ಲ. ಕಳೆದ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಅವರು, ಈ ವರ್ಷ ಮೆಗಾ ಹರಾಜಿನಲ್ಲಿ ಬಿಕಾರಿಯಾಗಿರಲಿಲ್ಲ. ಇದೀಗ ಭಾರತೀಯ ಕ್ರಿಕೆಟ್ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಬಂದು ವಿದೇಶಿ ಲೀಗ್ಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಸಜ್ಜಾಗಿದ್ದಾರೆ.
ಭಾವನಾತ್ಮಕ ಸಂದೇಶದ ಮೂಲಕ ವಿದಾಯ
ತಮ್ಮ ನಿವೃತ್ತಿ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಹಾಗೂ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿರುವ ವಿಜಯ್ ಶಂಕರ್, ತಮ್ಮ 25 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣವನ್ನು ಮೆಲುಕು ಹಾಕಿದ್ದಾರೆ. “ಕ್ರಿಕೆಟ್ ನನ್ನ ಉಸಿರು. ನನಗೆ ಕೇವಲ 10 ವರ್ಷವಿದ್ದಾಗ ಕ್ರಿಕೆಟ್ ಆಡಲು ಆರಂಭಿಸಿದೆ. ಇಂದು, 25 ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, ಅತ್ಯುನ್ನತ ಮಟ್ಟದಲ್ಲಿ ಆಡಲು ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನನ್ನ ದೇಶವನ್ನು ಪ್ರತಿನಿಧಿಸಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ಕ್ಷಣಗಳಲ್ಲಿ ಒಂದಾಗಿರುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ. ಹೊಸ ಅವಕಾಶಗಳನ್ನು ಅನ್ವೇಷಿಸುವ ಸಲುವಾಗಿ ಮತ್ತು ಇನ್ನಷ್ಟು ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಹಂಬಲದಿಂದ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮಗೆ ಈವರೆಗೆ ಬೆಂಬಲ ನೀಡಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ವಿಜಯ್ ಶಂಕರ್ ಅವರ ಕ್ರಿಕೆಟ್ ವೃತ್ತಿಬದುಕು
2019ರ ಐಸಿಸಿ ಏಕದಿನ ವಿಶ್ವಕಪ್ಗಾಗಿ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ವಿಜಯ್ ಶಂಕರ್ ತೀವ್ರ ಸಂಚಲನ ಮೂಡಿಸಿದ್ದರು. ಅಂಬಾಟಿ ರಾಯುಡು ಅವರನ್ನು ಕಡೆಗಣಿಸಿ, ಶಂಕರ್ ಅವರ ‘ತ್ರೀ-ಡೈಮೆನ್ಷನಲ್’ (ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್) ಸಾಮರ್ಥ್ಯವನ್ನು ಪರಿಗಣಿಸಿ ಅಂದಿನ ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿತ್ತು. ಜೂನ್ 27, 2019ರಂದು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯವೇ ಅವರು ಭಾರತದ ಪರ ಆಡಿದ ಕೊನೆಯ ಪಂದ್ಯವಾಗಿತ್ತು. ದೇಶೀಯ ಕ್ರಿಕೆಟ್ನಲ್ಲಿ ತಮಿಳುನಾಡು ತಂಡದ ಪರ ಮಿಂಚಿದ್ದ ಅವರು, ಇತ್ತೀಚೆಗೆ 2025-26ರ ರಣಜಿ ಟ್ರೋಫಿ ಋತುವಿನಲ್ಲಿ ಗುಜರಾತ್ ವಿರುದ್ಧ ತ್ರಿಪುರಾ ತಂಡವನ್ನು ಪ್ರತಿನಿಧಿಸಿದ್ದರು. ಜನವರಿ 29ರಂದು ನಡೆದ ಆ ಪಂದ್ಯವೇ ಅವರ ಕೊನೆಯ ಅಧಿಕೃತ ಪಂದ್ಯವಾಗಿದೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ನಂತಹ ಪ್ರಮುಖ ತಂಡಗಳ ಪರ ಅವರು ಆಡಿದ್ದಾರೆ. ಇದೀಗ ಅವರ ಈ ನಿವೃತ್ತಿ ನಿರ್ಧಾರವು ಅವರ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿದೆ.
ಇದನ್ನೂ ಓದಿ : ಬಾಕ್ಸಿಂಗ್ ಕೋಚ್ನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ? FIR ದಾಖಲು



















