ತಿರುವನಂತಪುರಂ : ಕೇರಳ ರಾಜಕಾರಣದಲ್ಲಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವ ಸಂಪ್ರದಾಯ ಮರುಕಳಿಸುವ ಮುನ್ಸೂಚನೆ ಸಿಕ್ಕಿದೆ. ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಒಟ್ಟು 140 ಸ್ಥಾನಗಳ ಪೈಕಿ 96 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದತ್ತ ಹೆಜ್ಜೆ ಹಾಕಿದೆ. ಈ ಸಂಭ್ರಮದ ನಡುವೆಯೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೇಳಿಕೆ ಕುತೂಹಲ ಕೆರಳಿಸಿದೆ.
ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ – https://www.youtube.com/watch?v=Nb20pfCzHUA
ತರೂರ್ ಹೇಳಿದ್ದೇನು?
ಆರಂಭಿಕ ಟ್ರೆಂಡ್ ಗಳು ಯುಡಿಎಫ್ ಗೆಲುವನ್ನು ಪಕ್ಕಾ ಮಾಡುತ್ತಿದ್ದಂತೆಯೇ, ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿ ನಿಮ್ಮ ಹೆಸರೂ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್, “ನಮ್ಮಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಾಕಷ್ಟು ಮಂದಿ ಸಮರ್ಥ ಆಕಾಂಕ್ಷಿಗಳಿದ್ದಾರೆ. ಸದ್ಯಕ್ಕೆ ವ್ಯಕ್ತಿಗಳಿಗಿಂತ ಹೆಚ್ಚಾಗಿ ಕೇರಳದಲ್ಲಿ ಸರ್ಕಾರದ ಬದಲಾವಣೆ ಮತ್ತು ನೀತಿಗಳ ಬದಲಾವಣೆ ಮುಖ್ಯವಾಗಿದೆ,” ಎಂದು ಹೇಳುವ ಮೂಲಕ ನೇರ ಉತ್ತರ ನೀಡದೆ ನಿಗೂಢತೆ ಕಾಯ್ದುಕೊಂಡಿದ್ದಾರೆ. ಕೇರಳದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು ಮತ್ತು ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಹೊಸ ಸರ್ಕಾರದ ಆದ್ಯತೆಯಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಎಡರಂಗದ ಅಸ್ತಿತ್ವಕ್ಕೆ ಸಂಕಷ್ಟ?
ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ (LDF) ಪತನದ ಹಾದಿಯಲ್ಲಿದೆ ಎಂದು ವಿಶ್ಲೇಷಿಸಿದ ತರೂರ್, ಈ ಫಲಿತಾಂಶವು ರಾಷ್ಟ್ರಮಟ್ಟದಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಲಿದೆ ಎಂದಿದ್ದಾರೆ. “ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡರಂಗವು ದೇಶದ ಯಾವುದೇ ರಾಜ್ಯದಲ್ಲೂ ಅಧಿಕಾರದಲ್ಲಿ ಇಲ್ಲದಂತಾಗಲಿದೆ. ಕೇರಳದ ಈ ಸೋಲು ಅವರ ಅಸ್ತಿತ್ವಕ್ಕೆ ದೊಡ್ಡ ಹೊಡೆತ ನೀಡಲಿದೆ,” ಎಂದು ಅವರು ಭವಿಷ್ಯ ನುಡಿದ್ದಾರೆ. 2021ರಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದು ದಾಖಲೆ ಬರೆದಿದ್ದ ಎಡರಂಗಕ್ಕೆ ಈ ಬಾರಿ ಆಡಳಿತ ವಿರೋಧಿ ಅಲೆ ಭಾರಿ ಹಿನ್ನಡೆ ತಂದೊಡ್ಡಿದೆ.
ಯುವಜನತೆಯ ವಲಸೆ ತಡೆಯುವುದೇ ಗುರಿ
ಕೇರಳದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ತರೂರ್, ರಾಜ್ಯದಲ್ಲಿ ಉದ್ಯೋಗಾವಕಾಶಗಳಿಲ್ಲದೆ ಯುವಜನತೆ ವಿದೇಶಗಳಿಗೆ ವಲಸೆ ಹೋಗುತ್ತಿರುವುದು ಕಳವಳಕಾರಿ ಸಂಗತಿ ಎಂದಿದ್ದಾರೆ. “ಹೊಸ ಸರ್ಕಾರವು ಕೇರಳವನ್ನು ಹೂಡಿಕೆದಾರರ ಸ್ವರ್ಗವನ್ನಾಗಿ ಮಾಡಬೇಕು. ಆ ಮೂಲಕ ಉದ್ಯೋಗ ಸೃಷ್ಟಿಸಿ ನಮ್ಮ ಯುವಶಕ್ತಿಯನ್ನು ರಾಜ್ಯದಲ್ಲೇ ಉಳಿಸಿಕೊಳ್ಳಬೇಕಿದೆ. ನನ್ನ ಅಭಿವೃದ್ಧಿಯ ದೃಷ್ಟಿಕೋನಗಳು ಹೊಸ ಸರ್ಕಾರಕ್ಕೆ ಸಹಕಾರಿಯಾಗಲಿವೆ ಎಂಬ ನಂಬಿಕೆ ನನಗಿದೆ,” ಎಂದು ತಿಳಿಸಿದರು. ಒಟ್ಟಿನಲ್ಲಿ, ಯುಡಿಎಫ್ ಗೆಲುವಿನ ದಡ ತಲುಪುತ್ತಿದ್ದಂತೆಯೇ ಕೇರಳದ “ಅಧಿಪತಿ” ಯಾರಾಗಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.
ಇದನ್ನೂ ಓದಿ : ಬಂಗಾಳದಲ್ಲಿ ಆರ್.ಜಿ. ಕರ್ ಸಂತ್ರಸ್ತೆಯ ತಾಯಿಗೆ ಹಿನ್ನಡೆ ; ಬಿಜೆಪಿ ಹೋರಾಟಕ್ಕೆ ತಣ್ಣೀರೆರಚಿದ ಮತದಾರ!



















