ವಿಶಾಖಪಟ್ಟಣ : ಆಂಧ್ರಪ್ರದೇಶದ ವಿಶಾಖಪಟ್ಟಣಂನ ಖಾಸಗಿ ಶಾಲೆಯೊಂದರಲ್ಲಿ ಹೋಮ್ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ಅಮಾನವೀಯವಾಗಿ ನಡೆದುಕೊಂಡ ಪರಿಣಾಮ ಆರು ವರ್ಷದ ಎಲ್ಕೆಜಿ ವಿದ್ಯಾರ್ಥಿಯೊಬ್ಬ ಶಾಲೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿದೆ. ಶಿಕ್ಷಕಿ ಹೊಡೆದಿದ್ದರಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ವಿಶಾಖಪಟ್ಟಣಂನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ಈ ವೇಳೆ ಆರು ವರ್ಷದ ಎಲ್ಕೆಜಿ ವಿದ್ಯಾರ್ಥಿ ತನಗೆ ನೀಡಲಾಗಿದ್ದ ಹೋಮ್ವರ್ಕ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದ ತೀವ್ರವಾಗಿ ಭಯಭೀತನಾದ ಮಗು ಜೋರಾಗಿ ಅಳುತ್ತಾ, ಕೆಮ್ಮುತ್ತಾ ಕುಸಿದು ಬಿದ್ದಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಮಗು ಕೊನೆಯುಸಿರೆಳೆದಿತ್ತು ಎಂದು ವೈದ್ಯರು ದೃಢಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾದ ಕರುಣಾಜನಕ ದೃಶ್ಯ
ಶಾಲೆಯ ತರಗತಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆಯ ದೃಶ್ಯಾವಳಿಗಳು ಸೆರೆಯಾಗಿವೆ. ಈ ದೃಶ್ಯಗಳು ಎಂಥವರ ಕರುಳನ್ನೂ ಹಿಂಡುವಂತಿವೆ. ವೀಡಿಯೊದಲ್ಲಿ ಶಿಕ್ಷಕಿಯು ಮಗುವನ್ನು ನಿಲ್ಲಿಸಿ ಬೈಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದರಿಂದ ಗಾಬರಿಗೊಂಡ ಮಗು ಅಳುತ್ತಾ, ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಳ್ಳುವಂತೆ ಕೈಗಳನ್ನು ಮುಗಿದು ಅಂಗಲಾಚಿದೆ. ಆದರೆ, ಇದ್ಯಾವುದಕ್ಕೂ ಕರಗದ ಶಿಕ್ಷಕಿ ಮಗುವಿನ ಶರ್ಟ್ ಮತ್ತು ಪ್ಯಾಂಟ್ ಅನ್ನು ಎಳೆದಾಡಿ, ಕಪಾಳಕ್ಕೆ ಹೊಡೆದಿದ್ದಾಳೆ. ಕಪಾಳಮೋಕ್ಷ ಮಾಡಿದ ಕೆಲವೇ ಸೆಕೆಂಡುಗಳಲ್ಲಿ ಆ ಮಗು ಆಕೆಯ ಮಡಿಲಿಗೆ ಕುಸಿದು ಬಿದ್ದಿದೆ. ಮಗು ಕುಸಿದು ಬಿದ್ದರೂ ಕುಳಿತಲ್ಲಿಂದಲೇ ಆತನನ್ನು ಮೇಲೆತ್ತಲು ಶಿಕ್ಷಕಿ ಯತ್ನಿಸಿದ್ದಾಳೆ. ಆದರೆ, ಆ ವೇಳೆಗೆ ಮಗು ಯಾವುದೇ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿರಲಿಲ್ಲ ಎಂಬುದು ದೃಶ್ಯಾವಳಿಯಿಂದ ದೃಢಪಟ್ಟಿದೆ.
ಪೋಷಕರ ಆಕ್ರೋಶ ಮತ್ತು ಆರೋಪ
ಮಗುವಿನ ತಂದೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದಾಗ ಶಾಲೆಯ ಆಡಳಿತ ಮಂಡಳಿಯಿಂದ ತಮಗೆ ಯಾವುದೇ ಕರೆಯಾಗಲೀ, ಮಾಹಿತಿಯಾಗಲೀ ಬಂದಿಲ್ಲ. ಬದಲಿಗೆ, ತಮ್ಮ ಸಂಬಂಧಿಕರ ಮನೆಯಲ್ಲಿ ಕೆಲಸ ಮಾಡುವ ಅಡುಗೆಯವರ ಮೂಲಕ ಈ ಆಘಾತಕಾರಿ ವಿಚಾರ ತಿಳಿಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಶಾಲೆಗೆ ಹೋಗುವ ಮುನ್ನ ತಮ್ಮ ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದ. ಆತನಿಗೆ ಯಾವುದೇ ಅನಾರೋಗ್ಯ ಇರಲಿಲ್ಲ. ಕೇವಲ ಶಿಕ್ಷಕಿ ಹೊಡೆದಿದ್ದರಿಂದಲೇ ತಮ್ಮ ಮಗು ಮೃತಪಟ್ಟಿದ್ದು, ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ತೀವ್ರವಾಗಿ ಆಗ್ರಹಿಸಿದ್ದಾರೆ.
ಪೊಲೀಸ್ ತನಿಖೆ ಮತ್ತು ಪ್ರಕರಣ ದಾಖಲು
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಶಾಲೆಯತ್ತ ದೌಡಾಯಿಸಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 194 ರ ಅಡಿಯಲ್ಲಿ ಅನುಮಾನಾಸ್ಪದ ಸಾವು ಎಂಬ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ತರಗತಿಯಲ್ಲಿದ್ದ ಇತರ ಸಿಬ್ಬಂದಿ ಹಾಗೂ ಆರೋಪಿ ಶಿಕ್ಷಕಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯ ಪ್ರತಿಯೊಂದು ಆಯಾಮಗಳನ್ನೂ ಪರಿಶೀಲಿಸುತ್ತಿರುವ ತನಿಖಾಧಿಕಾರಿಗಳು, ಮಗುವಿನ ಸಾವಿಗೆ ನಿಖರವಾದ ಕಾರಣವೇನೆಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಪ್ರತಿಕ್ರಿಯೆ ಮತ್ತು ಭರವಸೆ
ಈ ಹೃದಯವಿದ್ರಾವಕ ಘಟನೆಗೆ ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ತೀವ್ರ ಸಂತಾಪ ಸೂಚಿಸಿದ್ದಾರೆ. ಆರು ವರ್ಷದ ಕಂದಮ್ಮ ಶಿಕ್ಷಕಿಯೊಬ್ಬರ ಹಲ್ಲೆಯಿಂದಾಗಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಕಂಬನಿ ಮಿಡಿದಿದ್ದಾರೆ. ಮಗುವಿನ ಪೋಷಕರಿಗೆ ಧೈರ್ಯ ತುಂಬಿರುವ ಅವರು, ಇಂತಹ ಅಮಾನವೀಯ ಕೃತ್ಯ ಎಸಗಿದ ತಪ್ಪಿತಸ್ಥರ ವಿರುದ್ಧ ಹಾಗೂ ನಿರ್ಲಕ್ಷ್ಯ ತೋರಿದ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ. ಈ ಕಷ್ಟದ ಸಮಯದಲ್ಲಿ ಸರ್ಕಾರ ನಿಮ್ಮ ಜೊತೆಗಿರುತ್ತದೆ ಮತ್ತು ಮಗುವಿಗೆ ನ್ಯಾಯ ಒದಗಿಸಲಾಗುವುದು ಎಂದು ಅವರು ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ ಒಬ್ಬ ವ್ಯಕ್ತಿ ಎಷ್ಟು ಸಿಮ್ ಖರೀದಿಸಬಹುದು? ನಿಯಮ ಮೀರಿದ್ರೆ ಏನಾಗುತ್ತೆ?



















