ಬಳ್ಳಾರಿ: ಸಾವಿರಾರು ರೂಪಾಯಿ ಬಂಡವಾಳ ಹೂಡಿ ವರ್ಷಗಳ ಕಾಲ ಶ್ರಮಪಟ್ಟು ಬೆಳೆಸಿದ್ದ ನೇರಳೆ ತೋಟವನ್ನು ಕಿಡಿಗೇಡಿಗಳು ರಾತ್ರಿ ವೇಳೆ ಕಡಿದು ನಾಶಪಡಿಸಿರುವ ಘಟನೆ ಬಳ್ಳಾರಿ ತಾಲೂಕಿನ ದಾಸರ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯ ದಾಸರ ನಾಗೇನಹಳ್ಳಿ ಗ್ರಾಮದ ರೈತ ಗೋಶಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ 60ಕ್ಕೂ ಹೆಚ್ಚು ನೇರಳೆ ಗಿಡಗಳನ್ನು ದುಷ್ಕರ್ಮಿಗಳು ಶುಕ್ರವಾರ ತಡರಾತ್ರಿ ಉದ್ದೇಶಪೂರ್ವಕವಾಗಿ ಕಡಿದು ಹಾಕಿದ್ದಾರೆ. ಈ ಅಮಾನವೀಯ ಕೃತ್ಯ ರೈತ ಸಮುದಾಯವನ್ನು ಬೆಚ್ಚಿಬೀಳಿಸಿದ್ದು, ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶನಿವಾರ ಬೆಳಿಗ್ಗೆ ಹೊಲಕ್ಕೆ ತೆರಳಿದ ಗೋಶಪ್ಪ ಕುಟುಂಬದವರು ಗಿಡಗಳು ನೆಲಕ್ಕುರುಳಿರುವ ದೃಶ್ಯ ಕಂಡು ಆಘಾತಕ್ಕೊಳಗಾಗಿದ್ದಾರೆ. ಹಲವು ವರ್ಷಗಳ ಪರಿಶ್ರಮ, ಬೆವರು ಮತ್ತು ಬಂಡವಾಳದ ಫಲವಾಗಿ ಬೆಳೆದಿದ್ದ ಗಿಡಗಳು ಕ್ಷಣಾರ್ಧದಲ್ಲಿ ನಾಶವಾಗಿರುವುದನ್ನು ಕಂಡು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.
ಉತ್ತಮ ಆದಾಯದ ನಿರೀಕ್ಷೆಯಲ್ಲಿ ಗೋಶಪ್ಪ ಕುಟುಂಬ ಸಾವಿರಾರು ರೂಪಾಯಿ ವೆಚ್ಚ ಮಾಡಿ ನೇರಳೆ ಗಿಡಗಳನ್ನು ನೆಟ್ಟು, ನೀರುಣಿಸಿ, ಆರೈಕೆ ಮಾಡಿ ಬೆಳೆಸಿತ್ತು. ಆದರೆ ದುಷ್ಕರ್ಮಿಗಳ ಕೃತ್ಯದಿಂದ ರೈತನ ಭವಿಷ್ಯದ ಕನಸುಗಳೇ ನುಚ್ಚುನೂರಾಗಿವೆ. ನೇರಳೆ ಗಿಡಗಳು ಕೇವಲ ಮರಗಳಲ್ಲ, ನಮ್ಮ ಕುಟುಂಬದ ಭವಿಷ್ಯದ ಆಧಾರವಾಗಿದ್ದವು. ಹಲವು ವರ್ಷಗಳ ಶ್ರಮವನ್ನು ಒಂದೇ ರಾತ್ರಿ ನಾಶಪಡಿಸಿದ್ದಾರೆ ಎಂದು ನೊಂದ ರೈತ ಗೋಶಪ್ಪ ಅಳಲು ತೋಡಿಕೊಂಡಿದ್ದಾರೆ.
ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯ ಎಸಗಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ರೈತ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.



















