ಮುಂಬಯಿ: ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಪ್ರಸ್ತುತ ಪ್ರಯೋಗಿಸುತ್ತಿರುವ ತಂತ್ರದ ಬಗ್ಗೆ ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಭಾರತ ತಂಡದ ಕೋಚ್ ಆಗಿರುವ ಗಂಭೀರ್, ತಂಡದ ರಚನೆಗೆ ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇದು ಜಹೀರ್ಖಾನ್ ಅವರಿಗೆ ಇಷ್ಟವಾಗಿಲ್ಲ. ಹೀಗಾಗಿ ತನ್ನ ಹಳೆಯ ಸಹ ಆಟಗಾರನಿಗೆ ಜಹೀರ್ ಎಚ್ಚರಿಕೆ ನೀಡಿದ್ದು, ಈ ಬದಲಾವಣೆಗಳು ಆಟಗಾರರಲ್ಲಿ ಅಸುರಕ್ಷಿತ ಭಾವನೆ ಮೂಡಿಸಬಹುದು ಎಂದು ಹೇಳಿದ್ದಾರೆ.
ಜಹೀರ್ ಅವರ ಈ ಹೇಳಿಕೆ ಹಲವು ವಿಷಯಗಳನ್ನು ಒಳಗೊಂಡಿದೆ. ನಾಗಪುರದಲ್ಲಿ ಆಡಿದ ಮೊದಲ ಪಂದ್ಯದ ಆಡುವ 11ರ ಬಳಗದಲ್ಲಿ ಮೊದಲು ಶ್ರೇಯಸ್ ಅಯ್ಯರ್ ಇರಲಿಲ್ಲ. ನಂತರ ಸೇರಿಸಲಾಗಿದೆ. ಮುಂಬೈನ ಈ ಬ್ಯಾಟ್ಸ್ಮನ್ ಮೇಲಿನ ನಿರ್ಧಾರ ಅಭಿಮಾನಿಗಳಿಗೂ,ಕ್ರಿಕೆಟ್ ತಜ್ಞರಿಗೂ ಗೊಂದಲ ಉಂಟುಮಾಡಿತ್ತು. 2023ರ ಏಕದಿನ ವಿಶ್ವಕಪ್ನಲ್ಲಿ 500ಕ್ಕಿಂತ ಹೆಚ್ಚು ರನ್ ಗಳಿಸಿದ್ದ ಆಟಗಾರ ಚಾಂಪಿಯನ್ಸ್ ಟ್ರೋಫಿ ಯೋಜನೆಯ ಭಾಗವಾಗಿರದಿರುವುದು ಯಾರಿಗೂ ಅರ್ಥವಾಗಿರಲಿಲ್ಲ.
“ನೀವು ನಮ್ಯತೆಯನ್ನು ಹೊಂದಿರಬೇಕು ಎಂದು ಬಯಸುತ್ತೀರಿ. ಒಂದನೇ ಮತ್ತು ಎರಡನೇ ಕ್ರಮಾಂಕದಲ್ಲಿ ನಿರ್ಧಿಷ್ಟ ಆಟಗಾರರು ಇರುತ್ತಾರೆ. ಆದರೆ ಇತರ ಸ್ಥಾನಗಳು ಬದಲಾವಣೆಗೆ ಒಳಗಾಗಬಹುದು. ಆದರೆ, ಈ ಬದಲಾವಣೆಗಳಲ್ಲೂ ಕೆಲವು ನಿಯಮಗಳು ಅನ್ವಯಿಸುತ್ತವೆ. ನೀವು ಕೆಲವು ಶಿಸ್ತು ನಿಯಮಗಳನ್ನು ಅನುಸರಿಸಬೇಕು, ಮತ್ತು ಸರಿಯಾದ ಚರ್ಚೆಗಳು ನಡೆಯಬೇಕು. ಇಲ್ಲದಿದ್ದರೆ, ನೀವು ಅಸುರಕ್ಷತೆ ಸೃಷ್ಟಿಸಿದಂತಾಗುತ್ತದೆ. ಅದು ಯಾವಾಗಲಾದರೂ ನಿಮ್ಮ ವಿರುದ್ಧವೇ ತಿರುಗಿಬೀಳುತ್ತದೆ. ಈ ಪರಿಸ್ಥಿತಿಯನ್ನು ಸರಿಹೊಂದಿಸಿಕೊಳ್ಳಲು ನೀವು ಸಿದ್ಧರಾಗಿರಬೇಕಾಗುತ್ತದೆ,” ಎಂದು ಜಹೀರ್ ಖಾನ್ ಕ್ರಿಕ್ಬಜ್ ಮಾತುಕತೆಯಲ್ಲಿ ಹೇಳಿದ್ದಾರೆ.
” ಆಟಗಾರರ ಇತ್ತೀಚಿನ ಸಾಧನೆ ಮಾತ್ರ ಪರಿಗಣಿಸುವ ಹವ್ಯಾಸ ಹೆಚ್ಚಾಗಿದೆ. ನೀವು ರಾಹುಲ್ ದ್ರಾವಿಡ್ ಅವರ ತಂತ್ರ ಮತ್ತು ಗೌತಮ್ ಗಂಭೀರ್ ಅವರ ತಂತ್ರವನ್ನು ಹೋಲಿಸಿದರೆ ಪರಿಸ್ಥಿತಿ ಭಿನ್ನವಾಗಿದೆ. ಇದನ್ನು ಒಳ್ಳೆಯದು, ಕೆಟ್ಟದು ಅಥವಾ ಅಪಾಯಕಾರಿ ಎಂದೂ ಕರೆಯಬಹುದು. ಈ ವ್ಯವಸ್ಥೆಯಲ್ಲಿನ ಪ್ರತಿ ವ್ಯಕ್ತಿಯು ಇದನ್ನು ತಿಳಿದುಕೊಳ್ಳಬೇಕು. ಅದು ಟೀಮ್ ಮ್ಯಾನೇಜ್ಮೆಂಟ್, ಥಿಂಕ್ ಟ್ಯಾಂಕ್, ಆಯ್ಕೆಗಾರರು ಅಥವಾ ಇನ್ಯಾರೇ ಆಗಿರಲಿ. ಈ ಬದಲಾವಣೆಗಳನ್ನಾಗಿ ಅರ್ಥೈಸಬೇಕು. ಈ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು,” ಎಂದು ಜಹೀರ್ ಅಭಿಪ್ರಾಯಪಟ್ಟಿದ್ದಾರೆ.
ಗಂಭೀರ್ಗೆ ಹಿನ್ನಡೆ
ಗಂಭೀರ್ ಕಳೆದ ವರ್ಷ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಶ್ರೀಲಂಕಾ ವಿರುದ್ಧದ ತಮ್ಮ ಮೊದಲ ಏಕದಿನ ಸರಣಿ ಸೋತಿದ್ದರು. ಆದರೆ, ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು 2-0 ಮುನ್ನಡೆಯತ್ತ ಕರೆದೊಯ್ದಿದ್ದಾರೆ. ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಫೆಬ್ರವರಿ 12ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.