ಉಡುಪಿ : ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ದ್ವಿತೀಯ ವರ್ಷದ “ಹಲಸು ಮತ್ತು ಕೃಷಿ ಮೇಳ” ಆಯೋಜನೆ ಮಾಡಲಾಗಿದ್ದು, ಗ್ರಾಮೀಣ ಸಂಸ್ಕೃತಿಯ ವೈಭವ, ಹಲಸಿನ ಹಣ್ಣಿನ ಬಗೆಬಗೆಯ ಉತ್ಪನ್ನಗಳು ಮತ್ತು ಜನಪದ ಆಹಾರಗಳ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗಿದೆ.
ರೋಟರಿ ಕ್ಲಬ್ ಬೈಂದೂರು, ಬೈಂದೂರು ಉತ್ಸವ ಸಮಿತಿ, ಕಂಬದಕೋಣೆ ರೈತ ಸೇವಾ ಸಹಕಾರಿ ಸಂಘ ಉಪ್ಪುಂದ, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಹಾಗೂ ಸಮಷ್ಟಿ ಪ್ರತಿಷ್ಠಾನ ಇವರ ಸಹಯೋಗದಲ್ಲಿ ರೈತ ಬಳಗವು ಈ ವಿಶೇಷ ಮೇಳವನ್ನು ಆಯೋಜಿಸುತ್ತಿದೆ.
ದ್ವಿತೀಯ ವರ್ಷದ ಹಲಸು ಮತ್ತು ಕೃಷಿ ಮೇಳವನ್ನು ಕರಾವಳಿ ಭಾಗದ ಸಾಂಪ್ರದಾಯಿಕ ರುಚಿಗಳು, ಹಲಸಿನ ಹಣ್ಣಿನಿಂದ ತಯಾರಾಗುವ ವಿವಿಧ ತಿಂಡಿಗಳು ಹಾಗೂ ಕೃಷಿ ಬದುಕಿನ ಅನುಭವಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿದೆ.

ಈ ಮೇಳದಲ್ಲಿ ಚಂದ್ರ ಹಲಸು, ಸಿಂಧೂರ, ಸಿಂಗಾಪುರ ಹನಿ, ಹಾಗೂ ಅಪರೂಪದ ಹಲಸಿನ ತಳಿಗಳು ಪ್ರಮುಖ ಆಕರ್ಷಣೆಯಾಗಲಿವೆ. ಹಲಸಿನ ಹೋಳಿಗೆ, ಸಂಡಿಗೆ, ಹಪ್ಪಳ, ಜಿಲೇಬಿ ಹಾಗೂ ಹಲಸಿನ ವಿವಿಧ ಉತ್ಸವ ತಿನಿಸುಗಳು ಮೇಳದಲ್ಲಿರಲಿದೆ. ಹಲಸಿನ ರುಚಿ ಮಾತ್ರವಲ್ಲದೆ ಅದರ ಆರೋಗ್ಯಕರ ಗುಣಗಳ ಮಹತ್ವವನ್ನು ಸಹ ಮೇಳದಲ್ಲಿ ಪರಿಚಯಿಸಲಾಗುತ್ತದೆ.
ಈ ವಿಶೇಷ ಹಲಸು ಮತ್ತು ಕೃಷಿ ಮೇಳವು ಬೈಂದೂರಿನ ಜಿ.ಎನ್.ಆರ್ ಹಾಲ್ನಲ್ಲಿ ಇದೇ ಬರುವ ಮೇ 29, 30 ಮತ್ತು 31ರಂದು ನಡೆಯಲಿದೆ. ಮೂರು ದಿನವೂ ಬೆಳಿಗ್ಗೆ 10.00 ರಿಂದ ರಾತ್ರಿ 10.00 ಗಂಟೆಯವರೆಗೆ ಸಾರ್ವಜನಿಕರಿಗೆ “ಉಚಿತ ಪ್ರವೇಶ” ಇರಲಿದ್ದು, ಕುಟುಂಬ ಸಮೇತರಾಗಿ ಬಂದು ಹಲಸಿನ ಹಣ್ಣಿನ ವೈವಿಧ್ಯಮಯ ಉತ್ಪನ್ನಗಳನ್ನು ಆಸ್ವಾದಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು, ಗ್ರಾಮೀಣ ಕೃಷಿ, ಸ್ಥಳೀಯ ಆಹಾರ ಪದ್ಧತಿ ಮತ್ತು ಕರಾವಳಿ ಸಂಸ್ಕೃತಿಯನ್ನು ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಮಳಿಗೆಗಳು, ಆಹಾರ ಮಳಿಗೆಗಳು ಹಾಗೂ ರೈತರ ಉತ್ಪನ್ನಗಳ ಮಾರಾಟ ವ್ಯವಸ್ಥೆಯೂ ಇರಲಿದೆ. ರೈತರು ಹಾಗೂ ಹಲಸು ಬೆಳೆಗಾರರಿಗೆ ಇದು ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವ ಉತ್ತಮ ವೇದಿಕೆಯಾಗಲಿದೆ. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಶ್ರೀಧರ್ – 9482189216 ಹಾಗೂ ಪ್ರದೀಪ್ ಶೆಟ್ಟಿ ಕಾರ್ಕಟ್ಟೆ – 7406196059 ಅವರನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಇದನ್ನೂ ಓದಿ : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ – ಜೂನ್ನಲ್ಲೇ ಮಹಿಳೆಯರ ಕೈಗೆ ಹೊಸ ಡಿಜಿಟಲ್ ಪಾಸ್!



















