ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹಾಗೂ ನಂತರದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ನಡೆದಿರುವ ಬಹುಮೌಲ್ಯದ “TDR ಹಗರಣ” ಇದೀಗ ಮತ್ತೊಂದು ಗಂಭೀರ ತಿರುವು ಪಡೆದುಕೊಂಡಿದ್ದು, ಮೂರು ವರ್ಷಗಳ ಪ್ರಮುಖ ದಾಖಲೆಗಳೇ ನಾಪತ್ತೆಯಾಗಿರುವ ಬಗ್ಗೆ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಆರೋಪ ಮಾಡಿದ್ದಾರೆ.

2007-08ರಿಂದ ಆರಂಭಗೊಂಡು ಇಂದಿನವರೆಗೂ 20,000 ಕೋಟಿ ಮೀರಿದ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆ, 2014ರಿಂದ 2017ರವರೆಗೆ ನೀಡಲಾದ TDR/DRCಗಳಿಗೆ ಸಂಬಂಧಿಸಿದ ದಾಖಲೆಗಳು “ಭೂಸ್ವಾಧೀನ ಮತ್ತು TDR ವಿಭಾಗ” ಕಚೇರಿಯಿಂದ ಲಭ್ಯವಿಲ್ಲ ಎಂಬುದು RTI ಮೂಲಕ ಬಹಿರಂಗವಾಗಿದೆ.

RTI ಅರ್ಜಿಗೆ ಉತ್ತರಿಸಿದ ಉಪ ಆಯುಕ್ತರು, 31 ಮಾರ್ಚ್ 2014ರವರೆಗಿನ ಮಾಹಿತಿಯನ್ನು ಮಾತ್ರ ಒದಗಿಸಿದ್ದು, ಅದಾದ ನಂತರದ ಮೂರು ವರ್ಷಗಳ ದಾಖಲೆಗಳು ಲಭ್ಯವಿಲ್ಲವೆಂದು ಲಿಖಿತವಾಗಿ ತಿಳಿಸಿದ್ದಾರೆ. ಈ ಬೆಳವಣಿಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷವಾಗಿ ಮಹದೇವಪುರ, ಯಲಹಂಕ, ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯಗಳಲ್ಲಿ TDR ದುರುಪಯೋಗ ಅತಿ ಹೆಚ್ಚು ನಡೆದಿದೆ ಎನ್ನಲಾಗಿದೆ.

D, E, F ವಲಯಗಳಿಗೆ ಮೀಸಲಾದ TDRಗಳನ್ನು ಕಾನೂನುಬಾಹಿರವಾಗಿ A ಮತ್ತು B ವಲಯಗಳಲ್ಲಿ ಬಳಸಿದ ಆರೋಪವೂ ಇದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯ (ED), ಲೋಕಾಯುಕ್ತ ಹಾಗೂ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ವಿಚಾರಣೆಯಲ್ಲಿವೆ.
ಹಿಂದಿನ ದೂರು ಆಧರಿಸಿ 14 ಮಂದಿ IAS/KAS ಅಧಿಕಾರಿಗಳು ಹಾಗೂ 57 ಮಂದಿಯ ವಿರುದ್ಧ FIR ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 2014-15ರಿಂದ 2016-17ರವರೆಗೆ ನಡೆದ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ 50ಕ್ಕೂ ಹೆಚ್ಚು ದಾಖಲೆಗಳು, ಪ್ರಮುಖ ರಸ್ತೆ ಅಗಲೀಕರಣ, ಹೆಬ್ಬಾಳ-ಯಲಹಂಕ ಮಾರ್ಗ, ಮತ್ತು ಖಾಸಗಿ ಡೆವಲಪರ್ಗಳಿಗೆ ನೀಡಿದ TDR ಪ್ರಕರಣಗಳು, ನಾಪತ್ತೆಯಾಗಿರುವುದು ಗಂಭೀರ ಆತಂಕ ಮೂಡಿಸಿದೆ.
ಈ ನಡುವೆ, 2017 ರಿಂದ TDR ವಿಭಾಗವನ್ನು BBMPಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿತ್ತು. ಆದರೆ, ದಾಖಲೆಗಳು BBMP ಕಚೇರಿಯಲ್ಲೇ ಇದ್ದ ಸಂದರ್ಭದಲ್ಲಿ ನಾಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೀಗಾಗಿ, ಈ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಅಥವಾ CID ತನಿಖೆಗೆ ಒಪ್ಪಿಸಬೇಕೆಂದು ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ. ಜೊತೆಗೆ, ಸಂಬಂಧಪಟ್ಟ ಭ್ರಷ್ಟ ಅಧಿಕಾರಿಗಳು ಮತ್ತು TDR ಮಾಫಿಯಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದೂರು ನೀಡಿದ್ದಾರೆ.
ಇದನ್ನೂ ಓದಿ : ಕ್ರಿಕೆಟ್ ಸಾಮ್ರಾಟನ ಐತಿಹಾಸಿಕ ಸಾಧನೆ : IPLನಲ್ಲಿ 9,000 ರನ್ ಸಿಡಿಸಿದ ಮೊಟ್ಟಮೊದಲ ಬ್ಯಾಟರ್ ವಿರಾಟ್ ಕೊಹ್ಲಿ



















