ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ (ಎಸ್ಎಲ್ಸಿ) ದಿಢೀರ್ ನಾಯಕತ್ವದ ಬಿಕ್ಕಟ್ಟು ತಲೆದೋರಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಉನ್ನತ ಮಟ್ಟದ ನಿಯೋಗವು ಶ್ರೀಲಂಕಾಕ್ಕೆ ಭೇಟಿ ನೀಡಿದೆ. ಆರ್ಥಿಕ ಅಕ್ರಮಗಳು ಮತ್ತು ಆಡಳಿತಾತ್ಮಕ ವೈಫಲ್ಯಗಳ ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವಾ ಮತ್ತು ಅವರ ಕಾರ್ಯಕಾರಿ ಸಮಿತಿಯು ಇತ್ತೀಚೆಗಷ್ಟೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಶ್ರೀಲಂಕಾ ಸರ್ಕಾರವು ಕ್ರಿಕೆಟ್ ಆಡಳಿತವನ್ನು ಮುನ್ನಡೆಸಲು ಹೊಸ ಮಧ್ಯಂತರ ಸಮಿತಿಯನ್ನು ರಚಿಸಿದ್ದು, ಇದು ಐಸಿಸಿ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರದ ಹಸ್ತಕ್ಷೇಪ ಮತ್ತು ದಿಢೀರ್ ರಾಜೀನಾಮೆಗೆ ಕಾರಣ
ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ಶಮ್ಮಿ ಸಿಲ್ವಾ ನೇತೃತ್ವದ ಕಾರ್ಯಕಾರಿ ಸಮಿತಿಯು ಸಾಮೂಹಿಕವಾಗಿ ರಾಜೀನಾಮೆ ನೀಡಿದೆ. ಶ್ರೀಲಂಕಾ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡವು ಇತ್ತೀಚಿನ ತಿಂಗಳುಗಳಲ್ಲಿ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಸಿಲ್ವಾ ಅವರು ಶ್ರೀಲಂಕಾದ ನೂತನ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಆಂತರಿಕ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮಂಡಳಿಯ ಎಲ್ಲಾ ಪದಾಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನಗಳಿಂದ ಕೆಳಗಿಳಿದಿದ್ದಾರೆ. ಆರ್ಥಿಕ ಅಸ್ಥಿರತೆಯ ಆರೋಪಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಎದುರಾದ ಒತ್ತಡಗಳು ಕೂಡ ಈ ದಿಢೀರ್ ರಾಜೀನಾಮೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಹೊಸ ‘ಕ್ರಿಕೆಟ್ ಪರಿವರ್ತನಾ ಸಮಿತಿ’ಯ ರಚನೆ
ಮಂಡಳಿಯ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ತುಂಬಲು ಮತ್ತು ಆಡಳಿತವನ್ನು ಸರಿದಾರಿಗೆ ತರಲು ಕ್ರೀಡಾ ಸಚಿವ ಸುನಿಲ್ ಕುಮಾರ ಗಮಗೇ ಅವರು ಏಪ್ರಿಲ್ 29ರಂದು ಒಂಬತ್ತು ಸದಸ್ಯರ ಮಧ್ಯಂತರ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ‘ಕ್ರಿಕೆಟ್ ಟ್ರಾನ್ಸ್ಫರ್ಮೇಷನ್ ಕಮಿಟಿ’ (ಕ್ರಿಕೆಟ್ ಪರಿವರ್ತನಾ ಸಮಿತಿ) ಎಂದು ಹೆಸರಿಸಲಾಗಿರುವ ಈ ಹೊಸ ಮಂಡಳಿಯು ವಿರೋಧ ಪಕ್ಷದ ಪ್ರಮುಖ ರಾಜಕಾರಣಿ ಎರಾನ್ ವಿಕ್ರಮರತ್ನ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ವಿಶೇಷವೆಂದರೆ, ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗರಾದ ಕುಮಾರ್ ಸಂಗಕ್ಕಾರ, ರೋಷನ್ ಮಹಾನಾಮ ಮತ್ತು ಸಿದಾತ್ ವೆಟ್ಟಿಮುನಿ ಅವರು ಈ ಸಮಿತಿಯ ಪ್ರಮುಖ ಸದಸ್ಯರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಇವರಲ್ಲದೆ ತುಷಿರ ರದೆಲ್ಲಾ, ಅವಂತಿ ಕೊಲಂಬಗೆ, ಪ್ರಕಾಶ್ ಶಾಫ್ಟರ್, ಉಪುಲ್ ಕುಮಾರಪ್ಪೆರುಮ ಮತ್ತು ದಿನಾಲ್ ಫಿಲಿಪ್ಸ್ ಈ ಸಮಿತಿಯಲ್ಲಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಶ್ರೀಲಂಕಾ ಕ್ರಿಕೆಟ್ ವ್ಯವಸ್ಥೆಯಲ್ಲಿ ಮೂಲಭೂತ ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತರುವುದು ಈ ಸಮಿತಿಯ ಪ್ರಮುಖ ಉದ್ದೇಶವಾಗಿದೆ.
ಐಸಿಸಿ ನಿಯೋಗದ ಭೇಟಿ
ಸಾಮಾನ್ಯವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯಮಾವಳಿಗಳ ಪ್ರಕಾರ, ಚುನಾಯಿತ ಕ್ರಿಕೆಟ್ ಮಂಡಳಿಗಳ ಆಡಳಿತದಲ್ಲಿ ಯಾವುದೇ ದೇಶದ ಸರ್ಕಾರವು ನೇರವಾಗಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ, ಶ್ರೀಲಂಕಾದ ೧೯೭೩ರ ಕ್ರೀಡಾ ಕಾಯ್ದೆಯು ಕ್ರೀಡಾ ಸಚಿವರಿಗೆ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳನ್ನು ವಿಸರ್ಜಿಸುವ ಮತ್ತು ಅಗತ್ಯಬಿದ್ದಾಗ ಮಧ್ಯಂತರ ಸಮಿತಿಗಳನ್ನು ನೇಮಿಸುವ ಪರಮಾಧಿಕಾರವನ್ನು ನೀಡುತ್ತದೆ. ಸರ್ಕಾರದ ಈ ನಡೆಯಿಂದಾಗಿ ಐಸಿಸಿ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬ ಪ್ರಶ್ನೆ ಎದುರಾಗಿದ್ದು, ಬಿಕ್ಕಟ್ಟನ್ನು ಬಗೆಹರಿಸಲು ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜಾ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಅಧಿಕಾರಿಯೊಬ್ಬರು ಶ್ರೀಲಂಕಾಕ್ಕೆ ದೌಡಾಯಿಸಿದ್ದಾರೆ. ಹೊಸ ಆಡಳಿತ ವ್ಯವಸ್ಥೆಯನ್ನು ನೇಮಿಸಲು ಸೂಕ್ತ ಸಮಯದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಶ್ರೀಲಂಕಾ ಕಡೆಯಿಂದ ಐಸಿಸಿಗೆ ಅನೌಪಚಾರಿಕವಾಗಿ ಭರವಸೆ ನೀಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೂ, ಐಸಿಸಿ ಈ ಸರ್ಕಾರಿ ಹಸ್ತಕ್ಷೇಪವನ್ನು ಯಾವ ರೀತಿ ಪರಿಗಣಿಸಲಿದೆ ಮತ್ತು ಮುಂದಿನ ದಿನಗಳಲ್ಲಿ ಶ್ರೀಲಂಕಾ ಕ್ರಿಕೆಟ್ನ ಭವಿಷ್ಯ ಯಾವ ತಿರುವು ಪಡೆಯಲಿದೆ ಎಂಬುದನ್ನು ಇಡೀ ಕ್ರಿಕೆಟ್ ಜಗತ್ತು ಕಾದುನೋಡುತ್ತಿದೆ.
ಇದನ್ನೂ ಓದಿ : ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿ ಅಕ್ಷರ್ ಪಟೇಲ್, ಪಂತ್, ರಹಾನೆ!



















