ಶಿವಮೊಗ್ಗ : ಲಿಂಗನಮಕ್ಕಿ ಮುಳುಗಡೆ ಸಂತ್ರಸ್ತರ ಮಾದರಿಯಲ್ಲಿಯೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಭೂ ಒಡೆತನ ಇರುವವರಿಗೆ ಮಾತ್ರ ಪರಿಹಾರ ನೀಡಿದರೆ ಬಹಳಷ್ಟು ಕುಟುಂಬಗಳು ಬೀದಿ ಪಾಲಾಗಲಿವೆ.
ತಲಕಳಲೆ ವ್ಯಾಪ್ತಿಯಲ್ಲಿ ಬರುವ ಗುಂಡಿಬೈಲು, ಮರಾಠಿಕೇರಿ, ಹೆನ್ನಿ ಮತ್ತು ಹಿರೆಹೆನ್ನಿಯಲ್ಲಿರುವ ಸುಮಾರು 100 ಮನೆಗಳಲ್ಲಿ ಭೂ ಒಡೆತನ ಇರುವವರು ಶೇ.20 ರಷ್ಟೂ ಇಲ್ಲ. ಉಳಿದ ಶೇ.80 ಕುಟುಂಬಗಳು ಬಗರ್ಹುಕುಂ, ಅರಣ್ಯಭೂಮಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಕೆಲವರು 2-3 ಎಕರೆ ಸಾಗುವಳಿ ಮಾಡುತ್ತಿದ್ದರೂ ಅರ್ಧ ಅಥವಾ ಒಂದು ಎಕರೆಗೆ ಮಾತ್ರ ಖಾತೆ ಆಗಿದೆ. ಇಲ್ಲಿ4 ಎಕರೆಗಿಂತ ಹೆಚ್ಚು ಭೂಮಿ ಇರುವ ರೈತರೆ ಇಲ್ಲ. ಇನ್ನೂ ಅಚ್ಚರಿ ಸಂಗತಿ ಎಂದರೆ ಬಹುತೇಕ ಮನೆಗಳಿಗೆ ಹಕ್ಕುಪತ್ರ ಇನ್ನೂ ಲಭ್ಯವಾಗಿಲ್ಲ.
ರಾಜ್ಯ ಸರಕಾರ ಪಂಪ್ಡ್ ಸ್ಟೋರೇಜ್ ಸಂತ್ರಸ್ತರಿಗೆ ಉತ್ತಮ ಪರಿಹಾರ ನೀಡಲಾಗುವುದು ಎಂದು ಹೇಳುತ್ತಾ ಬಂದಿದೆ. ಆದರೆ, ಕಾನೂನು ಹೆಸರು ಹೇಳಿಕೊಂಡು ಪರಿಹಾರ ಘೋಷಿಸಿದಲ್ಲಿ ಸಂತ್ರಸ್ತರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಹೀಗಾದಲ್ಲಿ ಕೆಲವರಿಗೆ ಮಾತ್ರ ಪುಡಿಗಾಸಿನ ಪರಿಹಾರ ಸಿಕ್ಕಿದೆ, ಉಳಿದವರು ಯಾವುದೆ ಪರಿಹಾರವಿಲ್ಲದೆ ಕಾಡುಪಾಲಾಗಬೇಕಾಗುತ್ತದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾದ ಶೇ.50 ರಷ್ಟು ಸಂತ್ರಸ್ತರ ಪಾಡು ಇದೇ ರೀತಿಯಾಗಿತ್ತು. ಖಾತೆ ಇರುವವರು ಪರಿಹಾರ ಪಡೆದುಕೊಂಡರೆ, ಭೂ ಒಡೆತನ ಇಲ್ಲದವರು ಮತ್ತು ಕೂಲಿ ಕಾರ್ಮಿಕರು ಅರಣ್ಯದೊಳಗೆ ಮತ್ತೊಂದು ಕಡೆಗೆ ಸ್ಥಳಾಂತರಗೊಂಡು ನಿಕೃಷ್ಟ ಜೀವನ ನಡೆಸಬೇಕಾಯಿತು. ಅಂತವರು ಈಗಲೂ ಸುಭದ್ರ ಜೀವನ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
“2 ನೇ ಬಾರಿ ಸಂತ್ರಸ್ತರು:”
ದುರಂತ ಎಂದರೆ ಇಲ್ಲಿನ ಸಂತ್ರಸ್ತರಲ್ಲಿ ಹಲವರು ಲಿಂಗನಮಕ್ಕಿ ಮತ್ತು ತಲಕಳಲೆ ಜಲಾಶಯದಲ್ಲಿ ಮುಳುಗಡೆಯಾಗಿ ಯಾವುದೆ ಪರಿಹಾರ ಇಲ್ಲದೆ ಹೊಸ ಜಾಗದಲ್ಲಿ ನೆಲೆ ಕಂಡುಕೊಂಡವರೆ ಆಗಿದ್ದಾರೆ. ಆಗಲೂ ಪರಿಹಾರದಿಂದ ವಂಚಿತರಾಗಿದ್ದಾರೆ ಈಗಲೂ ಪರಿಹಾರ ಸಿಗದ ಭಯದಲ್ಲಿದ್ದಾರೆ. ಯೋಜನೆ ಜಾರಿ ವಿಷಯದಲ್ಲಿ ಪರಿಸರವಾದಿಗಳು ಹೋರಾಟ ನಡೆಸುತ್ತಿದ್ದಾರೆಯೆ ಹೊರತು ಸಂತ್ರಸ್ತರು ಇದೂವರೆಗೆ ಅದರ ವಿರುದ್ಧ ಧ್ವನಿ ಎತ್ತಿಲ್ಲಾ. ಸಂತ್ರಸ್ತರು ಯೋಜನೆ ವಿರುದ್ಧವಾಗಿಯೂ ಪರವಾಗಿಯೂ ಇಲ್ಲ.
ನಮ್ಮನ್ನು ಒಕ್ಕಲೆಬ್ಬಿಸುವುದೇ ಆದಲ್ಲಿ ಲಿಂಗನಮಕ್ಕಿ ಮುಳುಗಡೆ ಸಂತ್ರಸ್ತರ ರೀತಿಯಲ್ಲಿ ಅತಂತ್ರ ಮಾಡಬೇಡಿ. ಭೂಮಿಗೆ ಪರಿಹಾರ ಕೊಡುವುದರಿಂದ ಬದುಕು ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪರ್ಯಾಯ ಭೂಮಿಯೊಂದಿಗೆ ಪರಿಹಾರ ನಿಗದಿಸಬೇಕು. ಇನ್ನು ಮನೆಗಳಿಗೆ ಆಧುನಿಕ ಕಟ್ಟಡಗಳಿಗೆ ಸರಿಸಮಾನವಾದ ಪರಿಹಾರ ನಿಗದಿ ಮಾಡಬೇಕು, ಮಾನವೀಯ ನೆಲೆಗಟ್ಟಿನಲ್ಲಿಅಲ್ಲದೆ ಸುಭದ್ರ ಜೀವನ ಕಂಡುಕೊಳ್ಳಲು ಅನುಕೂಲವಾಗುವಂತೆ ಹೆಚ್ಚಿನ ಪರಿಹಾರ ಘೋಷಣೆ ಮಾಡಬೇಕು. ಸ್ಥಳೀಯ ಶಾಸಕರು ಮತ್ತು ಜಿಲ್ಲಾಉಸ್ತುವಾರಿ ಸಚಿವರು ಸಂತ್ರಸ್ತರ ವಸ್ತುಸ್ಥಿತಿ ಅರಿತು ಅಧಿಕ ಪರಿಹಾರ ಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ.