ಶಿವಮೊಗ್ಗ : ಇಲ್ಲಿನ ತಾವರೆಕೊಪ್ಪ ಸಫಾರಿಯಲ್ಲಿ ಕಳೆದ ಮಾರ್ಚ್ 19ರಂದು ಪಶುವೈದ್ಯೆ ಸಮೀಕ್ಷಾ ರೆಡ್ಡಿ(27)ಯನ್ನು ಬಲಿ ಪಡೆದಿದ್ದ ಹಂಸಿನಿ ನೀರಾನೆ ಸಾವನ್ನಪ್ಪಿದೆ. ಶಿವಮೊಗ್ಗ ಮೃಗಾಲಯವು ಹೊರಡಿಸಿರುವ ಪ್ರಕಟಣೆಯಲ್ಲಿ ಇಂದು (ಮಂಗಳವಾರ) ಮಧ್ಯಾಹ್ನ 3.08ಕ್ಕೆ ಹಂಸಿನಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.
ನೀರಾನೆ ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿದ್ದರಿಂದ ಸೋಂಕು ತಗುಲಿ ಅದು ಅನಾರೋಗ್ಯಕ್ಕೀಡಾಗಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ನೀರಾನೆ ಹಂಸಿನಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಕ್ಷರ್ ವಿ.ಎಂ ಮಾಹಿತಿ ನೀಡಿದ್ದಾರೆ.
12 ವರ್ಷದ ಈ ಹಂಸಿನಿ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಎರಡೂ ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಈ ಬಾರಿ ಹಂಸಿನಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು. ಹೀಗಾಗಿ ಈ ಬಾರಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಸಿನಿ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆದರೆ ಮರಿ ಕಣ್ಣು ಬಿಡುವ ಮೊದಲೇ ಗರ್ಭದಲ್ಲಿ ಸಾವನ್ನಪ್ಪಿತ್ತು. ಇದೀಗ ತಾಯಿ ಹಂಸಿನಿಯೂ ಸಹ ಮೃತಪಟ್ಟಿದೆ.
ಇದನ್ನೂ ಓದಿ : ಥಾರ್ಗೆ ಲಾರಿ ಗುದ್ದಿಸಿ ಫೈರಿಂಗ್.. ಗ್ರಾ.ಪಂ ಸದಸ್ಯನ ಬರ್ಬರ ಹತ್ಯೆಗೆ ಬೆಚ್ಚಿಬಿದ್ದ ವಿಜಯಪುರ!



















